ಜಾಗತಿಕ ಬಂಟರ ಸಂಘಗಳ ಒಕ್ಕೂಟ: ಆಡಳಿತ ಮಂಡಳಿ ಸಭೆ ಹಾಗೂ ಸಮಾಜ ಕಲ್ಯಾಣ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ 50 ಲಕ್ಷ ರೂಪಾಯಿ ಅನುದಾನ ವಿತರಣೆ
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಇದರ ಆಡಳಿತ ಮಂಡಳಿಯ ಸಭೆ ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವರದಿ ವಾಚಿಸಿದರು. ಕೋಶಾಧಿಕಾರಿ ಉಳ್ತೂರು ಮೋಹನ ದಾಸ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಬಳಿಕ ಒಕ್ಕೂಟದಿಂದ ಸಮಾಜ ಕಲ್ಯಾಣ ಕಾರ್ಯಕ್ರಮ ನೆರವೇರಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ವೈದ್ಯಕೀಯ ಚಿಕಿತ್ಸೆಗೆ, ಮದುವೆಗೆ, ವಿದ್ಯಾಭ್ಯಾಸಕ್ಕೆ, ಮನೆ ರಿಪೇರಿಗೆ, ಕ್ರೀಡೆಗೆ, 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (95%) ಹೀಗೆ ಹತ್ತಾರು ಸಮಾಜಮುಖಿ ಕೆಲಸಗಳಿಗೆ ಒಕ್ಕೂಟದಿಂದ ಸುಮಾರು 50 ಲಕ್ಷ ರೂಪಾಯಿಗೂ ಮಿಕ್ಕಿದ ಅನುದಾನವನ್ನು ವಿತರಿಸಲಾಯಿತು. ಕಳೆದ ಏಳು ವರ್ಷಗಳಿಂದ ಒಕ್ಕೂಟದಿಂದ ಈ ವರೆಗೆ 30 ಕೋಟಿ ರೂಪಾಯಿಗೂ ಮಿಕ್ಕಿದ ಅನುದಾನವನ್ನು ವಿತರಿಸಲಾಗಿದೆ ಎಂದು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಮುಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ತೋನ್ಸೆ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯಲ್ಲಿ , ಕನ್ಯಾನ ಸದಾಶಿವ ಶೆಟ್ಟಿ ಹವಾನಿಯಂತ್ರಿತ ಸಭಾಂಗಣ ರಚನೆಯಾಗುತ್ತಿದೆ ಎಂದರು.
ಸುಮಾರು 1,200 ಆಸನಗಳ ಸೌಲಭ್ಯ ಇರುವ ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣವನ್ನು ನಿರ್ಮಿಸಲು ಎಲ್ಲರ ಸಹಕಾರ ಬೇಕು. ಸಭಾಂಗಣವನ್ನು ನಿರ್ಮಾಣ ಮಾಡಿ ಸಮಾಜಕ್ಕೆ ಅರ್ಪಿಸಲಾಗುವುದು ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಒಂದು ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣದ ಅಗತ್ಯ ಇದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ದಾನಿಗಳ ನೆರವಿನಿಂದ ನಿರ್ಮಾಣ ಆಗುತ್ತಿರುವ ಹವಾ ನಿಯಂತ್ರಿತ ಸಭಾಂಗಣದ ಕಟ್ಟಡವು ವೇಗವನ್ನು ಪಡೆಯಬೇಕು. ಇದಕ್ಕೆ ನನ್ನ ಸಂಪೂರ್ಣ ಸಹಕಾರವೂ ಇದೆ. ಜೊತೆಗೆ ಎಲ್ಲಾ ದಾನಿಗಳು ಕೈಜೋಡಿಸಿ ಸಹಕಾರ ನೀಡಬೇಕು. ಸುಸಜ್ಜಿತ ಹವಾ ನಿಯಂತ್ರಿತ ಸಭಾಂಗಣದಿಂದ ಸಾಮಾನ್ಯ ಜನರಿಗೂ ಪ್ರಯೋಜನ ಆಗಬೇಕು. ಸಮಾಜವನ್ನು ಗಟ್ಟಿಗೊಳಿಸುವ ಜವಾಬ್ದಾರಿ ಇದೆ. ಸಭಾಂಗಣದ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕು. ಐಕಳ ಹರೀಶ್ ಶೆಟ್ಟಿ ಅವರ ಸಮಾಜ ಸೇವೆಯನ್ನು ಯಾವಾಗಲೂ ಸ್ಮರಿಸುವಂತದ್ದು, ಸಮಾಜದ ಬಗ್ಗೆ ಅವರಿಗೆ ಇರುವ ಕಾಳಜಿ ಮತ್ತು ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಇಂತಹ ನಾಯಕರನ್ನು ಪಡೆದ ಬಂಟ ಸಮಾಜ ಯಾವತ್ತೂ ಅವರಿಗೆ ಚಿರಋಣಿಯಾಗಿರುತ್ತದೆ ಎಂದು ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾ ನಿರ್ದೇಶಕರಾದ ಡಾ ಆರ್ ಕೆ ಶೆಟ್ಟಿ ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದೆ. ಐಕಳ ಹರೀಶ್ ಶೆಟ್ಟಿ ಅವರು ಇಂತಹ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಿ ಎಂದರು.
ಸಮಾರಂಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಆಯ್ಕೆಯಾದ ಪ್ರತಿಭಾ ಕುಳಾಯಿ ಅವರನ್ನು ಒಕ್ಕೂಟದಿಂದ ಐಕಳ ಹರೀಶ್ ಶೆಟ್ಟಿ ಸನ್ಮಾನಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕಾರ್ಯಗಳು ಶ್ಲಾಘನೀಯ. ಒಕ್ಕೂಟದಿಂದ ಸನ್ಮಾನ ಪಡೆಯುತ್ತಿರುವುದು ಅತೀವ ಸಂತೋಷವನ್ನುಂಟು ಮಾಡಿದೆ. ಇದು ನನ್ನ ಸಮಾಜಕ್ಕೆ, ಮಹಿಳೆಯರಿಗೆ ಮಾಡಿದ ಗೌರವ ಎಂದರು.
ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಸಿಎ ದಯಾಚರಣ್ ಶೆಟ್ಟಿ, ವಕೀಲ ಪೃಥ್ವಿರಾಜ ರೈ, ಮಹಾ ನಿರ್ದೇಶಕರಾದ ಡಾ.ಆರ್ ಕೆ. ಶೆಟ್ಟಿ, ನಿರ್ದೇಶಕರಾದ ಶಶಿಧರ್ ಶೆಟ್ಟಿ ಇಂನ್ನಜೆ, ಪೋಷಕ ಸದಸ್ಯರುಗಳಾದ ಗಿರೀಶ್ ಶೆಟ್ಟಿ ತೆಳ್ಳಾರ್, ಸತೀಶ್ ವಿ. ಶೆಟ್ಟಿ ಮಾಳ, ಹುಂತ್ರಿಕೆ ಸುಧಾಕರ್ ಶೆಟ್ಟಿ, ಲೋಕೇಶ್ ಶೆಟ್ಟಿ ಕುಳ, ಜಗನ್ನಾಥ್ ಚೌಟ, ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಶ್ರೀಧರ್ ವಿ.ಶೆಟ್ಟಿ ಆರೂರು, ಅಕ್ಕುಂಜೆ ಸತಿಶ್ಚಂದ್ರ ಶೆಟ್ಟಿ, ಶ್ರೀಮತಿ ಕಲ್ಪನಾ ಕೃಷ್ಣ ಶೆಟ್ಟಿ, ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಬಂಟರ ಸಂಘಗಳ ಅಧ್ಯಕ್ಷರನ್ನು, ಮಹಿಳಾ ಘಟಕದ ಅಧ್ಯಕ್ಷರನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಚಂದ್ರಹಾಸ ಶೆಟ್ಟಿ ವಂದಿಸಿದರು.
ಇದೇ ಸಂದರ್ಭದಲ್ಲಿ ಶೇಖಡ 95 ಕ್ಕೂ ಮಿಕ್ಕಿ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಶಿಕ್ಷಕ ಸಾಯಿನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಐಕಳ ಹರೀಶ್ ಶೆಟ್ಟಿ ಅವರು ಬಂಟರಿಗೆ ಒಂದು ಶಕ್ತಿ. ಸಮಾಜದಲ್ಲಿ ಅವರು ವಿಶ್ವ ಮಟ್ಟಕ್ಕೆ ಬೆಳೆಯಲು ಅವರು ಒಕ್ಕೂಟದ ಮೂಲಕ ಮಾಡಿರುವ ಸಮಾಜ ಸೇವಾ ಕಾರ್ಯಗಳೇ ಕಾರಣ ಎಂದರು.
ಈ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ಮಾಸ್ಟಸ್೯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಪಡೆದ ಬಬಿತಾ ಶೆಟ್ಟಿ ಸಹಿತ ಕ್ರೀಡೆಯಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಕಳೆದ ಎಸ್ ಎಸ್ ಎಲ್ ಸಿ ಪಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಗಳಿಸಿದ ಶ್ರೀರಾಮ್ ಶೆಟ್ಟಿಯನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಡಿ ಶೆಟ್ಟಿ ಸುರತ್ಕಲ್, ಆಶಾಕಿರಣ್ ರೈ ಸುರತ್ಕಲ್ ಸನ್ಮಾನ ಪತ್ರ ವಾಚಿಸಿದರು. ಯೊಗೀಶ್ ಆಳ್ವ ಪ್ರಾರ್ಥನೆಗೈದರು.ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರ್ವಹಿಸಿದರು.
0 Comments