ಕಾಸರಗೋಡು: ಬಂಧಿತನಾದ ವಾರಂಟ್ ಆರೋಪಿ ಪೊಲೀಸ್ ಠಾಣೆಯಲ್ಲಿ ವ್ಯಾಪಕ ದಾಂಧಲೆ ನಡೆಸಿದ ಘಟನೆ ನಡೆದಿದೆ. ತಡೆಯಲು ಯತ್ನಿಸಿದ ಎಸ್.ಐ. ಸಹಿತ ಪೊಲೀಸರ ಮೇಲೆಯೂ ಹಲ್ಲೆ ನಡೆಸಲಾಗಿದೆ. ನೆಕ್ರಾಜೆ ಚೂರಿಪಳ್ಳ ಬಳಿಯ ಪಿ.ಎ.ಅಬ್ದುಲ್ ನಿಶಾದ್(28) ವಿದ್ಯಾನಗರ ಠಾಣೆಯಲ್ಲಿ ದಾಂಧಲೆ ನಡೆಸಿದ ವ್ಯಕ್ತಿ. ನಿನ್ನೆ (ಸೋಮವಾರ) ಸಾಯಂಕಾಲ ಈ ಘಟನೆ ನಡೆದಿದೆ. 12 ಕೇಸುಗಳಲ್ಲಿ ಆರೋಪಿಯಾಗಿದ್ದು ಇದೀಗ ವಾರಂಟ್ ಹೊಂದಿರುವ ಅಬ್ದುಲ್ ನಿಷಾದ್ ನನ್ನು ಬಂಧಿಸಿ ಠಾಣೆಗೆ ತಂದಾಗ ಆತ ದಾಂಧಲೆ ಆರಂಭಿಸಿದ್ದನು. ತಲೆಯನ್ನು ಕಿಟಿಕಿ ಗಾಜಿಗೆ ಬಡಿದು ಗಾಯಗೊಳಿಸಲು ಯತ್ನಿಸಿದಾಗ ಪೊಲೀಸರು ತಡೆದರು. ಈ ವೇಳೆ ಜೂನಿಯರ್ ಎಸ್.ಐ.ಸಫವಾನ್(30), ಸಿವಿಲ್ ಪೊಲೀಸ್ ಆಫೀಸರ್ ಪ್ರಜಿತ್(30) ಎಂಬಿವರಿಗೆ ಗಾಯಗಳಾಗಿವೆ. ಅನಂತರ ಆರೋಪಿಯನ್ನು ಹಿಡಿದು ಜನರಲ್ ಆಸ್ಪತ್ರೆಗೆ ಕೊಂಡೊಯ್ದು ತಪಾಸಣೆ ನಡೆಸಲಾಯಿತು. ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ತಡೆ ಒಡ್ಡಿದ ಪ್ರಕರಣವನ್ನು ಆರೋಪಿಯ ಹೆಸರಿನಲ್ಲಿ ದಾಖಲಿಸಲಾಯಿತು.

0 Comments