ದುಬೈ : ಶಾರ್ಜಾ ಕರ್ನಾಟಕ ಸಂಘದ 23 ನೇ ವರ್ಷದ ವಾರ್ಷಿಕೋತ್ಸವ, 70ನೇ ಕನ್ನಡ ರಾಜ್ಯೋತ್ಸವದ ಅದ್ದೂರಿ ಕಾರ್ಯಕ್ರಮವು ಶಾರ್ಜಾದ ವುಮೇನ್ಸ್ ಯುನಿಯನ್ ಅಸೋಸಿಯೇಷನ ಸಭಾಂಗಣದಲ್ಲಿ ಜರಗಿತು. ಈ ಸಂದರ್ಭ ಉದ್ಯಮಿ ಸಮಾಜ ಸೇವಕರಾದ ರೊನಾಲ್ಡ್ ಮಾರ್ಟಿಸ್ ದಂಪತಿಗಳಿಗೆ 2025ನೇ ಸಾಲಿನ ಸಂಘದ ಪ್ರತಿಷ್ಠಿತ "ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ"ಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮೊದಲು ಪ್ರಶಸ್ತಿ ಪುರಸ್ಕೃತರನ್ನು ಗಣ್ಯಾತಿ ಗಣ್ಯರೊಂದಿಗೆ ಪೂರ್ಣಕುಂಭ ಕಲಶ ಮತ್ತು ಬ್ಯಾಂಡ್ ವಾದ್ಯಗಳ ಮೂಲಕ ವೇದಿಕೆಗೆ ಕರೆ ತರಲಾಯಿತು. ಪ್ರಶಸ್ತಿ ಸ್ವೀಕರಿಸಿದ ರೊನಾಲ್ಡ್ ಮಾರ್ಟಿಸ್ ರವರು ಮಾತನಾಡುತ್ತಾ ನನ್ನ ಈ ಚಿಕ್ಕ ಸಾಮಾಜಿಕ ಸೇವೆಗೆ ಸಂದ ದೊಡ್ಡ ಗೌರವವಾಗಿದೆ. ನಾನು ಈ ಪ್ರಶಸ್ತಿಯನ್ನು ಪ್ರೀತಿ ಪೂರ್ವಕವಾಗಿ ಸ್ವೀಕರಿಸಿದ್ದೇನೆ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ಹೇಳುತ್ತಾ ಕನ್ನಡ ಸಂಘ ಶಾರ್ಜಾದ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ರಂಗ ಭೂಮಿ ಸೇವೆಯನ್ನು ಗುರುತಿಸಿ ವಾಸು ಶೆಟ್ಟಿ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಅಬ್ದುಲ್ ಲತೀಫ್ ಮೂಲ್ಕಿ ದಂಪತಿಯವರನ್ನು ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸಂಘದ ಪದಾಧಿಕಾರಿ ಮಹಮ್ಮದ್ ಸಯ್ಯಾದ್ ಅಜ್ಮಲ್ ದಂಪತಿಗಳನ್ನು ಸನ್ಮಾನಿಸಲಾಯಿತು.ವಿಶೇಷ ಅತಿಥಿಯಾಗಿ ಆಗಮಿಸಿದ ಶ್ರೀಮತಿ ವಂದನಾ ರೈ ಕಾರ್ಕಳರವರಿಗೆ "ಮಯೂರ ವಿದ್ಯಾ ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು.

0 Comments