ತಿರುವನಂತಪುರ: ಚುನಾವಣೆ ಭರಾಟೆಯಲ್ಲಿರುವ ಕೇರಳದಲ್ಲಿ ಕೇರಳಸ್ಟೋರಿ 2 ಸಿನಿಮಾ ಈಗ ರಾಜಕೀಯ ವಸ್ತುವಾಗಿದೆ. ಸೆನ್ಸಾರ್ ಮಂಡಳಿಯು ಎ ಸರ್ಟಿಫಿಕೇಟ್ ಕೊಟ್ಟಿದ್ದು, ಫೆ.27ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಚಿತ್ರದಲ್ಲಿ ಕೇರಳದ ಜಾತ್ಯಾತೀತ ಮೌಲ್ಯಗಳಿಗೆ ವಿಷಕಾರುವ, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಅಂಶಗಳಿವೆ. ಹೀಗಾಗಿ ಚಿತ್ರವನ್ನು ಬಹಿಷ್ಕರಿಸಿ ಎಂದು ಜನತೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ. ಪಿಣರಾಯಿ ವಿಜಯನ್ಗೆ ತಿರುಗೇಟು ನೀಡಿರುವ ಬಿಜೆಪಿ ಜನತೆಗೆ ಬೆದರಿಕೆ ಹಾಕುವ ಬದಲು ನ್ಯಾಯಾಲಯಕ್ಕೆ ಹೋಗಿ ಎಂದಿದೆ.
ಸಿನಿಮಾದ ಬಗ್ಗೆ ಚರ್ಚೆ ಜೋರಾಗುತ್ತಿದ್ದಂತೆ ಕಣ್ಣೂರು ಮೂಲದ ಶ್ರೀದೇವ್ ನಂಬೂದಿರಿ ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಕೇರಳವನ್ನು ಕೆಟ್ಟದಾಗಿ ಬಿಂಬಿಸಿರುವ, ಕೋಮು-ಪ್ರಾದೇಶಿಕ ಸಂಘರ್ಷಕ್ಕೆ ಎಡೆಮಾಡಿಕೊಡುವ, ಶಾಂತಿ ಸುವ್ಯವಸ್ಥೆಕ್ಕೆ ಧಕ್ಕೆ ತರುವ ಅಂಶಗಳು ಟ್ರೇಲರ್ನಲ್ಲಿ ಕಂಡಿದೆ. ಹೀಗಾಗಿ, ಫಿಲ್ಮ್ ಸರ್ಟಿಫಿಕೇಟ್ ಕ್ಯಾನ್ಸಲ್ ಮಾಡಿ, ಚಿತ್ರ ಬಿಡುಗಡೆಗೆ ತಡೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಸಿಬಿಎಫ್ಸಿಗೆ ಕೇರಳ ಹೈಕೋರ್ಟ್ ನೋಟಿಸ್ ಕೊಟ್ಟಿದ್ದು ಫೆ.24ಕ್ಕೆ ವಿಚಾರಣೆ ನಡೆಯಲಿದೆ.

0 Comments