ಕುಂಬಳೆ : ಗರ್ಭಿಣಿಯಾದ ದನವೊಂದನ್ನು ಕದ್ದು ಮಾಂಸ ಮಾಡಿ ತಿಂದು ದನದ ಕಳೆಬರಹವನ್ನು ಉಪೇಕ್ಷಿಸಿ ಕುಕೃತ್ಯ ಮೆರೆದ ಕಟುಕರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕುಂಬಳೆಯ ಕಣಿಪುರೇಶನಾದ ಸಾಕ್ಷತ್ ಗೋಪಾಲಕೃಷ್ಣ ದೇವರ ಮೊರೆ ಹೋದ ಅಪರೂಪದ ಘಟನೆಯೊಂದು ಇಂದು ವರದಿಯಾಗಿದೆ.
ಕಳೆದ ಗುರುವಾರ ರಾತ್ರಿ ಇವರ ಮನೆಯ ಹಟ್ಟಿಯಿಂದ ಮೂರು ವರ್ಷದ, ಗಟ್ಟಿಮುಟ್ಟಾದ ಆರು ತಿಂಗಳ ಗರ್ಭಿಣಿ ದನವನ್ನು ಕಳ್ಳರು ಕದ್ದೊಯ್ದಿದ್ದರು. ಮುಂಜಾನೆ ವಿಶಾಲಾಕ್ಷ ಅವರು ಹಾಲು ಕರೆಯಲೆಂದು ಹಟ್ಟಿಗೆ ತೆರಳಿದ ವೇಳೆ 12 ದನ, ಕರುಗಳ ಪೈಕಿ ಒಂದು ದನ ನಾಪತ್ತೆಯಾಗಿತ್ತು.
ಕಟ್ಟಿ ಹಾಕಿದ ಹಗ್ಗ ತುಂಡರಿಸಿದ ಸ್ಥಿತಿಯಲ್ಲಿತ್ತು. ಕಳ್ಳರು ಹಟ್ಟಿಯೊಳಗೆ ನುಗ್ಗಿ ಹಗ್ಗ ತುಂಡರಿಸಿ, ದನ ಕದ್ದೊಯ್ದಿರಬೇಕೆಂದು ಅಂದಾಜಿಸಿ, ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ವಿಶಾಲಾಕ್ಷರವರು ದೂರು ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ ಅಲ್ಲಿಂದ 100 ಮೀಟರ್ ದೂರದಲ್ಲಿರುವ ಖಾಸಗಿ ವ್ಯಕ್ತಿಯ ಸ್ಥಳದ ಕಾಡು ಪೊದೆಗಳ ನಡುವೆ ದನದ ಕಳೆಬರವೊಂದು ಪತ್ತೆಯಾಗಿತ್ತು.
ಇದನ್ನು ತಮ್ಮದೇ ದನವೆಂದು ಖಾತರಿಪಡಿಸಿದ ವಿಶಾಲಾಕ್ಷರು ಕುಂಬಳೆ ಶ್ರೀ ಗೋಪಾಲ ಕೃಷ್ಣದೇವರ ಮೊರೆ ಹೋಗಿದ್ದಾರೆ.
ಇವರ ಮನೆಯ ಹಟ್ಟಿಯಲ್ಲಿರುವ ದನಗಳು ಕರು ಹಾಕಿದ ಕೂಡಲೇ, ದನದ ಹಾಲನ್ನು ಕುಂಬಳೆ ಶ್ರೀ ಗೋಪಾಲಕೃಷ್ಣ ದೇವರಿಗೆ ಸಮರ್ಪಸುತ್ತಿದ್ದರು. ಇದು ವಾಡಿಕೆಯಾಗಿತ್ತು. ಇದೀಗ ಕಟುಕರು ಕೊಂದ ದನ ಕೂಡ ಎರಡು ಬಾರಿ ಕರು ಹಾಕಿದ್ದಾಗ ಕುಂಬಳೆ ಶ್ರೀ ಗೋಪಾಲಕೃಷ್ಣ ದೇವರಿಗೆ ಸೇವೆ ಸಲ್ಲಿಸಿದ್ದರು. ಇದೀಗ ಆರು ತಿಂಗಳ ಗರ್ಭಿಣಿಯಾಗಿರುವ ದನವನ್ನ ಬಲಿ ತೆಗೆದು, ಕೃತ್ಯ ಎಸಗಿದ ತಪ್ಪಿತ್ತಸ್ಥ ಆರೋಪಿಗಳಿಗೆ ತಕ್ಕ ಶಾಸ್ತಿ ನೀಡಬೇಕೆಂದು ಅಗ್ರಹಿಸಿ ಇವರು ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದರು.
0 Comments