ತಿರುವನಂತಪುರ : ಕೇರಳದಲ್ಲಿ ತೀವ್ರ ಬಿಸಿಲಿನ ತಾಪ ಮುಂದುವರೆದಿದ್ದು, ಸೂರ್ಯಾಘಾತದಿಂದ ಚಿಕಿತ್ಸೆ ಪಡೆಯುತ್ತಿದ್ದ ವೆಲ್ಡಿಂಗ್ ಕೆಲಸಗಾರ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.  ತಿರುವನಂತಪುರದ  ಎಡವ ವೆಂಕುಳಂ ಮೂಲದ ಶೈನ್, ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು  ಬೆಳಗ್ಗೆ ನಿಧನರಾದರು. 

ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ತಾಪ ತೀವ್ರವಾಗಿದ್ದು, ಕಣ್ಣೂರಿನ ಉಲಿಕ್ಕಲ್‌ನ ಕಾಂಜಿರಕೊಲ್ಲಿಯಲ್ಲಿ ಪೈಪ್‌ಲೈನ್ ದುರಸ್ತಿ ಮಾಡುವಾಗ ಅಬಿನ್ ಜೋಸ್ ಎಂಬ ಯುವಕನಿಗೆ  ಸುಟ್ಟ ಗಾಯಗಳಾದ ಬಗ್ಗೆ ವರದಿಯಾಗಿದೆ. ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಪಾಲಕ್ಕಾಡ್‌ನ ಪೆರುವೆಂಪಿಲ್‌ನಲ್ಲಿ 12 ವರ್ಷದ ದೀಕ್ಷಿತ್ ಬಿಸಿಲಿನ ತಾಪಕ್ಕೆ ತುತ್ತಾಗಿದ್ದರು. ಆಟವಾಡಲು ಹೊರಗೆ ಹೋದಾಗ ಮಗುವಿನ  ಕುತ್ತಿಗೆಯ ಸುತ್ತ ಸುಟ್ಟ ಗಾಯಗಳಾಗಿವೆ.  ಪಾಲಕ್ಕಾಡ್ ನಿನ್ನೆ ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನವನ್ನು (39.9°C) ದಾಖಲಿಸಿದೆ. ಪುನಲೂರಿನಲ್ಲಿ 37.6°C ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆಯು ಮುಂಬರುವ ಐದು ದಿನಗಳವರೆಗೆ 12 ಜಿಲ್ಲೆಗಳಿಗೆ ಗರಿಷ್ಠ ತಾಪಮಾನದ ಎಚ್ಚರಿಕೆಯನ್ನು ನೀಡಿದೆ.