ನವದೆಹಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ನರೇಗಾ ಯೋಜನೆ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕುವ ಜಿ ರಾಮ್ ಜಿ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕಾರಿಸಲಾಯಿತು. 20 ವರ್ಷಗಳಷ್ಟು ಹಳೆಯದಾದ ಎಂಜಿಎನ್ಆರ್ಇಜಿಎ ಬದಲಿಗೆ ಪ್ರತಿ ವರ್ಷ 125 ದಿನಗಳವರೆಗೆ ಗ್ರಾಮೀಣ ಉದ್ಯೋಗಗಳನ್ನು ಖಾತರಿಪಡಿಸುವ ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ, 2025 ಅನ್ನು ಮಂಗಳವಾರ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಲೋಕಸಭೆಯಲ್ಲಿ ಮಂಡಿಸಿದ್ದರು.
ಇಂದು ಮಸೂದೆ ಮೇಲಿನ ಚರ್ಚೆಗೆ ಶಿವರಾಜ್ ಸಿಂಗ್ ಚೌಹಾಣ್ ಅವರು ಉತ್ತರಿಸಿದ ನಂತರ ಜಿ ರಾಮ್ ಜಿ ಮಸೂದೆಯನ್ನು ಅಂಗೀಕರಿಸಲಾಯಿತು. ಭಾರೀ ಗದ್ದಲದ ನಡುವೆ ಲೋಕಸಭೆಯಲ್ಲಿ ಅಂಗೀಕರಿಸಲಾದ ಮಸೂದೆಯ ಪ್ರತಿಗಳನ್ನು ಹರಿದು ಸ್ಪೀಕರ್ ಕುರ್ಚಿಯ ಕಡೆಗೆ ಎಸೆದ ವಿಪಕ್ಷ ಸಂಸದರು, ಕೇಂದ್ರ ಸರ್ಕಾರ ರಾಷ್ಟ್ರಪಿತನನ್ನು ಅವಮಾನಿಸಿದೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿಸಿದೆ ಎಂದು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು. ಈ ಆರೋಪಗಳ ನಡುವೆ ಸರ್ಕಾರ ಹೊಸ ಮಸೂದೆಯನ್ನು ಸಮರ್ಥಿಸಿಕೊಂಡಿತು.
ಸದನದಲ್ಲಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ 2009ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಾತ್ಮ ಗಾಂಧಿಯವರ ಹೆಸರನ್ನು ನರೇಗಾಗೆ ಸೇರಿಸಲಾಗಿದೆ ಆರಂಭದಲ್ಲಿ ಅದು ನರೇಗಾ ಆಗಿತ್ತು, ಮಹಾತ್ಮ ಗಾಂಧಿಯವರ ಹೆಸರನ್ನು ಮಸೂದೆಯಲ್ಲಿ ಸೇರಿಸಿರಲಿಲ್ಲ. 2009ರ ಚುನಾವಣೆ ಹತ್ತಿರ ಬಂದಾಗ ಮತಗಳನ್ನು ಪಡೆಯಲು ಕಾಂಗ್ರೆಸ್ ಬಾಪು ಅವರನ್ನು ನೆನಪಿಸಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಎಂಜಿಎನ್ಇಜಿಎ ಅನ್ನು ಸರಿಯಾಗಿ ಮತ್ತು ಬಲವಾಗಿ ಜಾರಿಗೆ ತಂದರು.
ಕಾಂಗ್ರೆಸ್ ಬಾಪು ಅವರ ಆದರ್ಶಗಳನ್ನ ಹತ್ಯೆ ಮಾಡಿತು. ಆದರೆ ಎನ್ಡಿಎ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಸ್ವಚ್ಛ ಭಾರತ ಮಿಷನ್, ಆಯುಷ್ಮಾನ್ ಭಾರತ್ ಅಡಿಯಲ್ಲಿ ಪಕ್ಕಾ ಮನೆಗಳನ್ನ ನಿರ್ಮಿಸಿ ಬಾಪು ಅವರ ಆದರ್ಶಗಳನ್ನ ಪುನರುಜ್ಜೀವನಗೊಳಿಸಿತು ಎಂದರು, ಸರ್ಕಾರವು ಜವಾಹರಲಾಲ್ ನೆಹರು ಮತ್ತು ಮಹಾತ್ಮಾ ಗಾಂಧಿಯವರ ಹೆಸರಿನ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನ ಪಟ್ಟಿ ಮಾಡಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಟೀಕೆಗೆ ತಿರುಗೇಟು ನೀಡಿದರು. ಮಸೂದೆ ಅಂಗೀಕಾರವಾದ ನಂತರದ ಗದ್ದಲಕ್ಕೆ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನ ಮುಂದೂಡಿದರು.
ಇದಕ್ಕೂ ಮುನ್ನ, ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಸಂಕೀರ್ಣದೊಳಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಈ ಶಾಸನ ಗಾಂಧಿಯವರಿಗೆ ಮಾಡಿದ ಅವಮಾನ ಮತ್ತು ಗ್ರಾಮೀಣ ಭಾರತದಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಕಾರಣವಾದ ಕೆಲಸ ಮಾಡುವ ಹಕ್ಕಿಗೆ ಒಂದು ಹೊಡೆತ ಎಂದು ಕರೆದರು. ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಮಕರ ದ್ವಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದರೊಂದಿಗೆ ಭಾಗಿಯಾಗಿದ್ದರು.

0 Comments