Ticker

6/recent/ticker-posts

ಆರ್.ಸಿ.ಬಿ.ವಿಜಯೋತ್ಸವ ವೇಳೆ ಕಾಲ್ತುಳಿತ, 11 ಮೃತ್ಯು, 25 ಕ್ಕೂ ಹೆಚ್ಚು ಮಂದಿಗೆ ಗಾಯ. ಸಾವಿನ ಸಂಖೈ ಏರಿಕೆ ಸಾಧ್ಯತೆ


 ಬೆಂಗಳೂರು: ಆರ್.ಸಿ.ಬಿ.ಗೆಲುವು ವಿಜಯೋತ್ಸವದ ವೇಳೆ ಬೆಂಗಳೂರು ಚಿನ್ನಸ್ವಾಮಿ‌ ಕ್ರೀಡಾಂಗಣದಲ್ಲಿ  ಭಾರೀ ದುರಂತ ಉಂಟಾಗಿದೆ. ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ್ದು 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಅಭಿಮಾನಿಗಳು ಒಳಗೆ ಒಮ್ಮೆಲೆ ನುಗ್ಗಿದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಕಾಲ್ತುಳಿತ ಉಂಟಾಯಿತು ಎಂದು ತಿಳಿದು ಬಂದಿದೆ.


ಬೌರಿಂಗ್ ಆಸ್ಪತ್ರೆಯಲ್ಲಿ ಏಳು ಹಾಗೂ ವೈದೇಹಿ ಆಸ್ಪತ್ರೆಯಲ್ಲಿ ನಾಲ್ವರು ಅಭಿಮಾನಿಗಳು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮೃತಪಟ್ಟವರು ಯಲಹಂಕ ಮೂಲದ ಓರ್ವ ಯುವತಿ ಹಾಗೂ 6 ಯುವಕರು ಎಂದು ಗುರುತಿಸಲಾಗಿದೆ. ಮೃತಪಟ್ಟವರಲ್ಲಿ 14 ವರ್ಷದ ಬಾಲಕಿ ದಿವ್ಯಾಂಶಿ ಸಹ ಸೇರಿದ್ದಾಳೆ.

18ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆಲುವನ್ನು ಸಂಭ್ರಮಿಸಲು ಆರ್‌ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದರು. ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಸೇರಿದಂತೆ ರಜತ್‌ ಪಾಟೀದಾರ್ ಪಡೆಗೆ ಆರ್‌ಸಿಬಿ ಫ್ಯಾನ್ಸ್ ಅದ್ಧೂರಿ ಸ್ವಾಗತ ಕೋರಿದರು.


ವಿಶೇಷ ಬಸ್‌ನಲ್ಲಿ ವಿಧಾನಸೌಧಕ್ಕೆ ಆಟಗಾರರನ್ನು ಕರೆತರಲಾಯಿತು. ಈ ವೇಳೆ ಮಾರ್ಗದುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿ ಆಟಗಾರರನ್ನು ಅಭಿನಂದಿಸಿದರು. ಫ್ಯಾನ್ಸ್ ಕ್ರೇಜ್ ನೋಡಿ ಆಟಗಾರರು ಖುಷಿಪಟ್ಟರು.

ಸಂಜೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಇತ್ತು. ಸಮಾರಂಭದಲ್ಲಿ ಆಟಗಾರರನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಸ್ಟೇಡಿಯಂ ಬಳಿ ನೆರೆದಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

Post a Comment

0 Comments