ಸುರತ್ಕಲ್: ಸಮೀಪದ ಮುಕ್ಕ ಮಿತ್ರಪಟ್ಟದ ವೃದ್ಧೆ ಮಾತ್ರವಿರುವ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಇನ್ನೊರ್ವನಿಗಾಗಿ ಶೋಧ ಮುಂದುವರಿದಿದೆ. ಬಂಧಿತರನ್ನು ಸುರತ್ಕಲ್ ಗುಡ್ಡೆಕೊಪ್ಪ ಶ್ರೀ ರಾಮ ಭಜನಾ ಮಂದಿರ ಬಳಿಯ ನಿವಾಸಿ ಶೈನ್ ಎಚ್. ಪುತ್ರನ್(21), ಬೆಂಗಳೂರು ಎಳಚನಹಳ್ಳಿ, ಕಾಶಿನಗರ 5ನೇ ಕ್ರಾಸ್ ನಿವಾಸಿ ವಿನೋದ್ ಯಾನೆ ವಿನೋದ್ ಕುಮಾರ್ (33), ಬೆಂಗಳೂರು ಉಡಿಪಾಳ್ಯ ಕನಕಪುರ ಮುಖ್ಯ ರಸ್ತೆ ನಿವಾಸಿ ಗಿರೀಶ್ ಯಾನೆ ಸೈಕಲ್ ಗಿರಿ(28) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 4.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್, 3 ಮೊಬೈಲ್ ಫೋನ್ ಹಾಗೂ 3 ಸಾವಿರ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಳಿಕ ಸುರತ್ಕಲ್ ಪೊಲೀಸ್ ಉಪ ನಿರೀಕ್ಷಕ ರಘು ನಾಯ್ಕ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ಆರಂಭಿಸಿ, ಕಳವು ಕೃತ್ಯ ನಡೆದಿದ್ದ ಮನೆಯ ಸಮೀಪದ ಎಲ್ಲಾ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ಶೈನ್ ಎಚ್. ಪುತ್ರನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಉಡುಪಿ ಜಿಲ್ಲೆ ಕಾರ್ಕಳ ನಿವಾಸಿ ಜೈಸನ್ ಯಾನೆ ಲೆನ್ಸನ್ ಎಂಬಾತನೊಂದಿಗೆ ಸೇರಿಕೊಂಡು ಕೃತ್ಯ ಎಸಗಿದ್ದು, ಕಳವುಗೈದ ಚಿನ್ನಾಭರಣವನ್ನು ಬೆಂಗಳೂರಿನ ವಿನೋದ್ ಕುಮಾರ್ಗೆ ಮಾರಾಟ ಮಾಡಿರುವುದಾಗಿ ಬಾಯಿಬಿಟ್ಟಿದ್ದ. ಇದೇ ಜಾಡು ಹಿಡಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯದಲ್ಲಿ ನೇರ ಭಾಗಿಯಾಗಿದ್ದ ಇನ್ನೋರ್ವ ಆರೋಪಿ ಜೈಸನ್ ಯಾನೆ ಲೆನ್ಸನ್ ಕಾರ್ಕಳ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

0 Comments