ಬದಿಯಡ್ಕ : "ಐಕ್ಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಓಣಂನಂತಹ ರಾಷ್ಟ್ರೀಯ ಹಬ್ಬಗಳನ್ನು ಕೂಡ ಕೋಮುವಾದದ ದೃಷ್ಟಿಕೋನದಲ್ಲಿ ಬಿಂಬಿಸಿ ಸಮಾಜವನ್ನು ವಿಭಜಿಸಲು ಕೆಲ ಕೋಮುವಾದಿ ಶಕ್ತಿಗಳು ನಡೆಸುತ್ತಿರುವ ಪ್ರಯತ್ನ ಅಪಾಯಕಾರಿ" ಎಂದು ಬಿಜೆಪಿ ರಾಜ್ಯ ಸೆಲ್ ಸಂಯೋಜಕ ವಿ.ಕೆ. ಸಜೀವನ್ ಹೇಳಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ಬದಿಯಡ್ಕ ಪಂಚಾಯತ್ ಸಮಿತಿ ಸಂಯುಕ್ತವಾಗಿ ಬದಿಯಡ್ಕ ಇರಾ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಓಣಂ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ‘ವಂದೇ ಮಾತರಂ’ ಅನ್ನು ವಿಭಜಿಸಿದ ಘಟನೆ ನಡೆದಿದ್ದು, ಸರಿಯಾಗಿ ಹತ್ತು ವರ್ಷಗಳ ಬಳಿಕ ಭಾರತ ವಿಭಜನೆಯಾಯಿತು ಎಂಬ ಇತಿಹಾಸ ನಮ್ಮ ಮುಂದಿದೆ. ಇದೇ ರೀತಿಯ ಪರಿಸ್ಥಿತಿಯನ್ನು 2026ರಲ್ಲಿಯೂ ಕಾಂಗ್ರೆಸ್ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಓಣಂ ಆಚರಣೆಯನ್ನೂ ಇದೇ ರೀತಿಯಲ್ಲಿ ವಿಭಜಿಸುವ ಪ್ರಯತ್ನಗಳನ್ನು ತಡೆದು ನಿಲ್ಲಿಸಬೇಕು ಎಂದು ವಿ.ಕೆ. ಸಜೀವನ್ ಹೇಳಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷರಾದ ಪಿ. ರಮೇಶ್, ಡಿ. ಶಂಕರ, ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಕೆ.ಎಂ., ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ., ಬದಿಯಡ್ಕ ವೆಸ್ಟ್ ಏರಿಯಾ ಅಧ್ಯಕ್ಷ ಮಹೇಶ್ ವಳಕುಂಜ ಹಾಗೂ ಬದಿಯಡ್ಕ ಈಸ್ಟ್ ಏರಿಯಾ ಅಧ್ಯಕ್ಷ ಉದನೇಶ್ವರ್ ಉಪಸ್ಥಿತರಿದ್ದರು. ಓಣಂ ಆಚರಣೆಯ ಅಂಗವಾಗಿ ವಿವಿಧ ಓಣಂ ಆಟಗಳು ಹಾಗೂ 'ಓಣಂ ಸದ್ಯ'ವೂ ನಡೆಯಿತು.

0 Comments