ಪೆರ್ಲ: ಕಳೆದ ಶನಿವಾರ ಮದ್ಯರಾತ್ರಿ ಶಾರ್ಟ್ ಸರ್ಕ್ಯೂಟ್ ನೆಪದಲ್ಲಿ ಸಂಭವಿಸಿದ ದುರಂತದಿಂದ ಸರಿಸುಮಾರು 2 ಕೋಟಿಗಿಂತ ಹೆಚ್ಚು ನಾಶನಷ್ಟ ಸಂಭವಿಸಿತ್ತು. ಇದೀಗ ವ್ಯಾಪಾರಿಗಳು ಅದೇ ಸ್ಥಳದಲ್ಲಿ ಮತ್ತೆ ಅಲ್ಪ ಸ್ವಲ್ಪ ಸಾಮಾಗ್ರಿಗಳನ್ನಿರಿಸಿ ಬುಧವಾರದಿಂದ ವ್ಯಾಪಾರಕ್ಕೆ ತೊಡಗಿದ್ದು ಈ ನಡುವೆ ಇಂದು ಮಧ್ಯಾಹ್ನ ಸ್ಥಳಕ್ಕಾಗಮಿಸಿದ ಪಿಡಬ್ಲುಡಿ ಇಲಾಖೆ ಹೊತ್ತಿ ಉರಿದ ಅಂಗಡಿಗಳ ಮಾಲೀಕರಿಗೆ ಸ್ಥಳ ತೆರವು ನೋಟಿಸು ನೀಡಿದೆ. ಅಂಗಡಿಯ ಗೋಡೆ ಬಾಗಿಲುಗಳಿಗೆ ನೋಟಿಸು ಅಂಟಿಸಿದ ಪಿಡಬ್ಲುಡಿ ಇಲಾಖೆಯ ಈ ಧೋರಣೆ ಅಮಾಯಕ ವ್ಯಾಪಾರಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಂಗಡಿಗಳ ಅಗ್ನಿ ದುರಂತ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದು ಇದನ್ನು ತನಿಖೆ ನಡೆಸದ ಸಂಬಂಧಪಟ್ಟ ಇಲಾಖೆಗಳು ತೋರ್ಪಡಿಸುವ ನಿರ್ಲಕ್ಷ್ಯ ಧೋರಣೆಯಿಂದ ವ್ಯಾಪಾರಿಗಳು ಅತಂತ್ರರಾಗಿದ್ದಾರೆ. ದುರಂತದಿಂದ ಪುನಶ್ಚೇತನಗೊಳ್ಳುವಂತೆ ವ್ಯಾಪಾರಿ ಏಕೋಪನ ಸಮಿತಿಯವರು ಬೆಂಕಿ ಆಘಾತ ಸಂಭವಿಸಿದ ಅಂಗಡಿ ಮಾಲಿಕರಿಗೆ ತಲಾ 50 ಸಾವಿರ ರೂಗಳಂತೆ ಪರಿಹಾರ ಧನ ನೀಡಿತ್ತು. ಇದರಿಂದಾಗಿ ಹೊತ್ತಿ ಉರಿದ ಅಂಗಡಿಗಳ ಸಾಮಾಗ್ರಿಗಳನ್ನು ತೆರವುಗೊಳಿಸಿ ಪುನಃ ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರಿಗೆ ಪಿಡಬ್ಲುಡಿ ಇಲಾಖೆ ಈ ಅಂಗಡಿಗಳನ್ನು ಏಳು ದಿವಸಗಳೊಳಗೆ ತೆರವುಗೊಳಿಸುವಂತೆ ಆದೇಶ ಹೊರಡಿಸಿದೆ. ಕಳೆದ ಐದು ದಶಕಗಳಿಂದ ಈ ಕಟ್ಟಡ ಇಲ್ಲಿ ಕಾರ್ಯಚರಿಸುತ್ತಿದ್ದು ಇದರ ವ್ಯಾಜ್ಯ ಕೋರ್ಟಿನಲ್ಲಿ ನಡೆಯುತ್ತಿರುವ ಮಧ್ಯೆ ಕಳೆದ ದಿನ ಇದ್ದಕ್ಕಿಂದಂತೆ ಕಟ್ಟಡ ಬೆಂಕಿಗಾಹುತಿಯಾಗಿತ್ತು. ಈ ವಿದ್ಯಮಾನ ಸ್ಥಳೀಯರಲ್ಲಿ ಹಲವು ಸಂಶಯಗಳಿಗೆ ಎಡೆ ಮಾಡಿದೆ.

0 Comments