ಬೆಂಗಳೂರು : ಚಿಕ್ಕಬಾಣಾವರದ ಗುಡ್ಡೆ ಬಸವಪುರದಲ್ಲಿ ಆಗಸ್ಟ್ 2026ರಲ್ಲಿ ನಡೆದ ತಂದೆ ಮತ್ತು 5 ವರ್ಷದ ಮಗನ ಜೋಡಿ ಕೊಲೆ ಪ್ರಕರಣ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಈ ಕೃತ್ಯದಲ್ಲಿ ಮೃತ ಅಭಿನಂದನ್ (38) ಅವರ ಪತ್ನಿ ಹರಿಣಿ ತನ್ನ ಪ್ರಿಯಕರ ವಿನಯ್ ಜೊತೆ ಸೇರಿ ಪತಿ ಹಾಗೂ ಸ್ವಂತ ಮಗ ಯದುವೀರ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಮೂಲತಃ ಕುಣಿಗಲ್ನವರಾದ ಅಭಿನಂದನ್ (38), ಎಲೆಕ್ಟ್ರಾನಿಕ್ ಸಿಟಿಯ ಎಂಎನ್ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಗ ಯದುವೀರ್ಗೆ 5 ವರ್ಷ ವಯಸ್ಸಾಗಿತ್ತು. ಆಗಸ್ಟ್ 17, ಸೋಮವಾರ ಮುಂಜಾನೆ ಹರಿಣಿ ತಾನೇ ಸ್ವತಃ ಪೊಲೀಸ್ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ, ತನ್ನ ಪತಿ ಮತ್ತು ಮಗ ನಿದ್ದೆಯಲ್ಲೆ ಸಾವಿಗೀಡಾಗಿದ್ದು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸುಳ್ಳು ಕಥೆ ಕಟ್ಟಿದ್ದಳು.
ಸ್ಥಳಕ್ಕೆ ಧಾವಿಸಿದ ಚಿಕ್ಕಬಾಣಾವರ ಪೊಲೀಸರು ಪರಿಶೀಲಿಸಿದಾಗ ಮೃತ ದೇಹಗಳ ಮೇಲೆ ಸಣ್ಣಪುಟ್ಟ ಗಾಯದ ಗುರುತುಗಳು ಕಂಡುಬಂದವು. ಭಾನುವಾರ ರಾತ್ರಿ ದಂಪತಿ ನಡುವೆ ಜೋರಾದ ಜಗಳ ನಡೆದಿತ್ತು ಮತ್ತು ಇಬ್ಬರೂ ಬೇರೆ ಬೇರೆ ಕೊಠಡಿಯಲ್ಲಿ ಮಲಗಿದ್ದರು ಎಂಬುದು ಬೆಳಕಿಗೆ ಬಂದಿತು. ಅದೇ ಮನೆಯಲ್ಲಿದ್ದ ಪತ್ನಿಗೆ ಪತಿ-ಮಗನ ಸಾವು ಗೊತ್ತೇ ಇಲ್ಲ ಎನ್ನುವುದು ಪೊಲೀಸರಲ್ಲಿ ಬಲವಾದ ಅನುಮಾನ ಮೂಡಿಸಿತು.
ಕೊಲೆಗೆ ಅಸಲಿ ಕಾರಣ ಅನೈತಿಕ ಸಂಬಂಧ ಎಂಬುದನ್ನು ಪೋಲಿಸರು ಸ್ವತಃ ಹಂತಕಿಯಿಂದಲೇ ಬಾಯಿ ಬಿಡಿಸಿದ್ದರು. ಹರಿಣಿಗೆ ವಿನಯ್ ಎಂಬ ಯುವಕನೊಂದಿಗೆ ಅನೈತಿಕ ಸಂಬಂಧವಿತ್ತು. ಈ ವಿಚಾರ ಪತಿ ಅಭಿನಂದನ್ಗೆ ತಿಳಿದು ಮನೆಯಲ್ಲಿ ಪದೇ ಪದೇ ಗಲಾಟೆಯಾಗುತ್ತಿತ್ತು. ಪೊಲೀಸರು ಹರಿಣಿಯ ಮೊಬೈಲ್ ಕರೆಗಳ ವಿವರ (CDR) ಪರಿಶೀಲಿಸಿ, ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ. ಪ್ರಿಯಕರ ವಿನಯ್ ಜೊತೆ ಜೀವಿಸಲು ಅಡ್ಡಿಯಾಗಿದ್ದ ಪತಿಯನ್ನು ಮೊದಲು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಹಾಗೂ ಕೃತ್ಯವನ್ನು ಕಣ್ಣಾರೆ ಕಂಡ ಸ್ವಂತ ಮಗ ಎಲ್ಲಾದರೂ ವಿಷಯ ಬಾಯಿಬಿಡಬಹುದು ಎಂಬ ಭಯದಿಂದ ಆ ಮಗುವನ್ನೂ ಸಹ ಕ್ರೂರವಾಗಿ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಪ್ರಸ್ತುತ ಚಿಕ್ಕಬಾಣಾವರ ಪೊಲೀಸರು ಆರೋಪಿ ಹರಿಣಿಯನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರ ವಿನಯ್ ಪತ್ತೆಗಾಗಿ ಬಲೆ ಬೀಸಿದ್ದಾರೆ.

0 Comments