ಬದಿಯಡ್ಕ : ಕಾರಿನಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಯುವಕನೋರ್ವನನ್ನು ಬದಿಯಡ್ಕ ಅಬಕಾರಿ ಇಲಾಖಾ ಪೋಲಿಸರು ಓಣಂ ಡ್ರೈವ್ ಕಾರ್ಯಾಚರಣೆಯಂತೆ ಬಂಧಿಸಿದ್ದಾರೆ. ರೇಂಜ್ ಇನ್ಸ್ಪೆಕ್ಟರ್ ಜಿಷ್ಣು ಪಿ ಆರ್ ಮತ್ತು ಸಿಬ್ಬಂದಿಗಳು ಆ.14 ರಾತ್ರಿ 10 ಗಂಟೆ ವೇಳೆಗೆ ಪೆರ್ಲ ಸಮೀಪದ ಒರುಂಬೋಡಿ ಬಳಿಯ ಖಂಡಿಗೆ ಎಂಬಲ್ಲಿನ ಅಬೂಬಕ್ಕರ್ ಎಂಬವರ ಪುತ್ರ ಅಬ್ದುಲ್ ಅಜೀಜ್ ಎಂಬಾತನ್ನು ಬಂಧಿಸಿದರು. ಈತ ಪ್ಯಾಕೇಟುಗಳಾಗಿ ದೇಹದಲ್ಲಿರಿಸಿ ಸಾಗಿಸುತ್ತಿದ್ದ ಒಟ್ಟು 162 ಗ್ರಾಂ ಎಂಡಿಎಂಎ ಮತ್ತು ಸಾಗಾಟಕ್ಕೆ ಬಳಸಿದ್ದ ಕೆಎಲ್ 14 ಕೆ 1338 ಸಂಖ್ಯೆ ಐ 20 ಹೊಂದಿರುವ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಎನ್ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ.
ಪೆರ್ಲ ಪೇಟೆಯಲ್ಲಿ ಭಾರೀ ಎಂಡಿಎಂಎ ವ್ಯವಹಾರ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಅಬಕಾರಿ ಇಲಾಖೆ ತೀವ್ರ ರಹಸ್ಯ ಕಾರ್ಯಾಚರಣೆಗಿಳಿದಿದೆ. ಇದೀಗ ಜಾಲದ ಕೊಂಡಿಗಳೆನ್ನಲಾದ ಹಲವರ ವಿರುದ್ಧ ನಿಗಾ ಇರಿಸಿದ್ದು ಮಾದಕ ವಸ್ತು ದಂಧೆಯನ್ನು ಸಮಗ್ರ ಮಟ್ಟ ಹಾಕುವುದಾಗಿ ಇಲಾಖೆ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ಸಹಾಯಕ ಅಬಕಾರಿ ನಿರೀಕ್ಷಕ ಶ್ರೀನಿವಾಸನ್ ಪಾಟೀಲ್, ಪ್ರಿವೆಂಟಿವ್ ಆಫೀಸರ್ ಗಳಾದ ಮಂಜುನಾಥ ಆಳ್ವ ಕೆ, ವಿಜಯನ್ ಸಿ, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಪ್ರಜಿತ್ ಕೆ.ಆರ್, ಸಿವಿಲ್ ಅಬಕಾರಿ ಅಧಿಕಾರಿಗಳಾದ ಪ್ರಭಾಕರ ಎಂ.ಎ, ಜನಾರ್ದನ ಎನ್, ವಿನೋದ್ ಬಿ, ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿ ಧನ್ಯ ಟಿ, ಮತ್ತು ಸಿವಿಲ್ ಅಬಕಾರಿ ಅಧಿಕಾರಿ ಸಾಗರ್ ಪಾಲ್ಗೊಂಡಿದ್ದರು.
.jpeg)

0 Comments