ಕಾಸರಗೋಡು : ರಸ್ತೆಗೆ ಅಡ್ಡವಾಗಿ ಬೆಳೆದಿದ್ದ ಪೊದೆಗಳನ್ನು ತಪ್ಪಿಸಲು ಚಾಲಕ ಬಸ್ನ್ನು ಪಕ್ಕಕ್ಕೆ ತಿರುಗಿಸಿದಾಗ ಶಾಲಾ ಬಸ್ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಘಟನೆ ಗುರುವಾರ ಬೆಳಗ್ಗೆ ಕಾಸರಗೋಡು ನಗರದ ನೆಲ್ಲಿಕುಂಜೆಯಲ್ಲಿ ನಡೆದಿದೆ. ಬಸ್ನಲ್ಲಿ ಸುಮಾರು 20 ವಿದ್ಯಾರ್ಥಿಗಳಿದ್ದು, ಯಾವುದೇ ಗಾಯಗಳಾಗಿಲ್ಲ.
ಬಂಕರಕುನ್ನು-ಕುಡೂರು ರಸ್ತೆಯಲ್ಲಿ, ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು ಅವರ ನಿವಾಸದ ಸಮೀಪ ಬೆಳಗ್ಗೆ ಸುಮಾರು 9.30ಕ್ಕೆ ಘಟನೆ ನಡೆದಿದೆ. ನೆಲ್ಲಿಕುಂಜೆ ಅನ್ವರುಲ್ ಉಲೂಮ್ ಏಯ್ಡೆಡ್ ಅಪ್ಪರ್ ಪ್ರೈಮರಿ ಶಾಲೆಗೆ ಸೇರಿದ ಬಸ್ನಲ್ಲಿ, ಅದೇ ಸಮಿತಿಯಡಿ ನಡೆಯುವ ಥಂಗಳ್ ಉಪ್ಪಪ್ಪ ಇಂಗ್ಲಿಷ್ ಮೀಡಿಯಂ ಶಾಲೆಯ ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳೂ ಇದ್ದರು.
ಬಂಕರಕುನ್ನು-ಕುಡೂರು ರಸ್ತೆ ಕೇವಲ 2.5 ಮೀಟರ್ನಷ್ಟು ಅಗಲವಿದ್ದು, ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ ಎಂದು ಚಾಲಕ ಅಕ್ಬರ್ ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಗುಂಡಿಗಳು, ಇಳಿಜಾರು ಹಾಗೂ ತಿರುವು ಇದ್ದು, ರಸ್ತೆಯ ಬದಿಯಲ್ಲಿದ್ದ ಪೊದೆಗಳನ್ನು ತಪ್ಪಿಸಲು ಪ್ರಯತ್ನಿಸಿದಾಗ ಬಸ್ ರಸ್ತೆ ಅಂಚಿನಿಂದ ಜಾರಿಕೊಂಡು ಕಂದಕಕ್ಕೆ ಉರುಳಿದೆ ಎಂದು ಚಾಲಕ ತಿಳಿಸಿದ್ದಾರೆ. ಬಸ್ ಪಲ್ಟಿಯಾದಾಗ ಮಕ್ಕಳು ಭಯಗೊಂಡು ಕಿರುಚಲು ಆರಂಭಿಸಿದ್ದು, ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರತೆಗೆದರು.
ರಸ್ತೆಯ ದುಸ್ಥಿತಿಯೇ ಅಪಾಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಶಾಲಾ ಬಸ್ ಸೇರಿದಂತೆ ಹಲವು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿರುವ ಪೊದೆಗಳನ್ನು ಕೂಡಲೇ ತೆರವುಗೊಳಿಸಿ, ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

0 Comments