ಕಣ್ಣೂರು: ಕಾಞಂಗಾಡು ಪೂಚ್ಚಕಾಡು ಬಳಿಯ ಬ್ಯಾಂಕ್ ಉದ್ಯೋಗಿ ಯುವತಿ ಆತ್ಮಹತ್ಯೆಗೈದ ಬೆನ್ನಲ್ಲೇ ಆಕೆಯೊಂದಿಗೆ ಮದುವೆ ನಿಶ್ಚಯಗೊಂಡ ಯುವಕನೂ ಆತ್ಮಹತ್ಯೆಗೈದ ದಾರುಣ ಘಟನೆ ನಡೆದಿದೆ. ಕಣ್ಣೂರು ಅಂಬಲತ್ತಟ್ಟು ನಿವಾಸಿ ವಿ. ಅಮಲ್ ಮೃತಪಟ್ಟವರು. ಇವರು ಎರ್ನಾಕುಲಂನಲ್ಲಿ ಕೆಲಸ ಮಾಡುತ್ತಿದ್ದರು.
ಬುಧವಾರ ಬೆಳಿಗ್ಗೆ ಪೂಚ್ಚಕಾಡು ಕಾಟ್ಟಾಂಪಳ್ಳಿ ನಿವಾಸಿ ಅನುಶ್ರೀ(25) ಯ ಮೃತದೇಹ ಕರ್ನಾಟಕದ ವಾಸಸ್ಥಳದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿತ್ತು. ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಾಟಕದ ಹುಣಸೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಬ್ಯಾಂಕ್ ಸಮೀಪದಲ್ಲೇ ಇರುವ ಮನೆಯಲ್ಲಿ ವಾಸಿಸುತ್ತಿದ್ದರು. ಅದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನುಶ್ರೀಯ ಮೃತದೇಹ ಪತ್ತೆಯಾಗಿದೆ. ಈ ಮಾಹಿತಿ ಹೊರ ಬಂದ ಅಲ್ಪ ಹೊತ್ತಿನಲ್ಲೇ ಆಕೆಯ ಜತೆ ಮದುವೆ ನಿಗದಿಯಾಗಿದ್ದ ಯುವಕನೂ ಆತ್ಮಹತ್ಯೆಗೈದಿದ್ದಾನೆ. ಈತನೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೌಕರನಾಗಿದ್ದನು. ಡಿಸೆಂಬರ್ 26 ರಂದು ಇಬ್ಬರ ವಿವಾಹ ನಿಶ್ಚಯವಾಗಿತ್ತು.

0 Comments