ತಿರುವನಂತಪುರ : ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಪಂಪಾ ನದಿಯಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 2 ಮತ್ತು 3ರಂದು ಶಬರಿಮಲೆ ಯಾತ್ರೆಯನ್ನು ಸಾಧ್ಯವಾದಷ್ಟು ಮುಂದೂಡುವಂತೆ ತಿರುವಿದಾಂಕೂರು ದೇವಸ್ವಂ ಮಂಡಳಿ ಭಕ್ತರಿಗೆ ಮನವಿ ಮಾಡಿದೆ.
ನಿರಪುತ್ತರಿ ಆಚರಣೆಯ ಅಂಗವಾಗಿ ಈ ದಿನಗಳಲ್ಲಿ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಅತಿಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದ ಸಾಧ್ಯತೆ ಇರುವುದರಿಂದ ಯಾತ್ರೆಯನ್ನು ಮುಂದೂಡುವುದು ಸುರಕ್ಷಿತ ಎಂದು ಮಂಡಳಿ ತಿಳಿಸಿದೆ.
ಸಿಂಹ ಮಾಸದ ಪೂಜೆಗಳಿಗಾಗಿ ಆಗಸ್ಟ್ 16ರಿಂದ 21ರವರೆಗೆ ಹಾಗೂ ಓಣಂ ವಿಶೇಷ ಪೂಜೆಗಳಿಗಾಗಿ ಆಗಸ್ಟ್ 24ರಿಂದ 28ರವರೆಗೆ ನಡೆ ತೆರೆಯಲಿದ್ದು ಸನ್ನಿಧಾನ ದರ್ಶನ ದಿನಗಳನ್ನು ಮುಂದೂಡಬಹುದು ಎಂದು ದೇವಸ್ವಂ ಮಂಡಳಿ ಸೂಚಿಸಿದೆ.
ರಾಜ್ಯದಲ್ಲಿ ಮುಂದುವರಿದಿರುವ ಅತಿಭಾರೀ ಮಳೆಯ ಹಿನ್ನೆಲೆಯಲ್ಲಿ ಭೂಕುಸಿತ ಮತ್ತು ಪ್ರವಾಹದ ಅಪಾಯ ಹೆಚ್ಚಿರುವುದರಿಂದ ಭಕ್ತರು ಎಚ್ಚರಿಕೆ ವಹಿಸಿ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ದೇವಸ್ವಂ ಮಂಡಳಿ ಮನವಿ ಮಾಡಿದೆ.

0 Comments