Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಜೈಲಿನಿಂದ ತಪ್ಪಿಸಿಕೊಂಡ ಆರೋಪಿ ಆಧಾರ್ ಕಾರ್ಡ್ ಪಡೆಯಲು ಪೋಲಿಸ್ ಠಾಣೆಗೆ ಬಂದರೂ ಗುರುತು ಹಿಡಿಯಲಾಗದ ಪೋಲಿಸರು

ಆಲುವಾ : ಆಲುವಾ ಸಬ್‌ಜೈಲಿನಿಂದ ಪರಾರಿಯಾಗಿದ್ದ ಆರೋಪಿ, ಜೈಲಿನಿಂದ ತಪ್ಪಿಸಿಕೊಂಡ ಕೇವಲ ಒಂದು ಗಂಟೆಯಲ್ಲೇ ತನ್ನ ಆಧಾರ್ ಕಾರ್ಡ್‌ ಪಡೆಯಲು ಪೆರುಂಬಾವೂರು ಪೊಲೀಸ್ ಠಾಣೆಗೆ ಬಂದಿರುವ ಘಟನೆ ನಡೆದಿದೆ. ಆದರೆ ಠಾಣೆಯಲ್ಲಿದ್ದ ಪೊಲೀಸರು ಆತನನ್ನು ಗುರುತಿಸದ ಕಾರಣ ಆತ ಅಲ್ಲಿಂದಲೂ ತಪ್ಪಿಸಿಕೊಂಡಿದ್ದಾನೆ.

ಅಸ್ಸಾಂ ಮೂಲದ 28 ವರ್ಷದ ಮಧುರ್ಜ್ಯ ಸೋನೋವಾಲ್‌ ಈ ನಾಟಕೀಯ ಘಟನೆಯ ಆರೋಪಿ. ಎಡತ್ತಲದಲ್ಲಿ ಕಳವು ಮಾಡಿದ್ದ 9 ಮೊಬೈಲ್‌ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಶನಿವಾರ ಪೊಲೀಸರು ಆತನನ್ನು ಬಂಧಿಸಿದ್ದರು. ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಆತನ ಆಧಾರ್ ಕಾರ್ಡ್‌ ವಶಕ್ಕೆ ಪಡೆದಿದ್ದರು.

ಮಂಗಳವಾರ ಸಂಜೆ 4.30ರ ಸುಮಾರಿಗೆ ಸಬ್‌ಜೈಲಿನಿಂದ ಪರಾರಿಯಾದ ಮಧುರ್ಜ್ಯ, ಸುಮಾರು 5.30ಕ್ಕೆ ಆಧಾರ್ ಕಾರ್ಡ್‌ ಪಡೆಯಲು ಪೆರುಂಬಾವೂರು ಪೊಲೀಸ್ ಠಾಣೆಗೆ ತೆರಳಿದ್ದಾನೆ. ಜೈಲಿನಲ್ಲಿ ಧರಿಸಿದ್ದ ಹಳದಿ ಟೀ-ಶರ್ಟ್ ಮತ್ತು ಕೇಸರಿ ಬಣ್ಣದ ಲುಂಗಿಯಲ್ಲೇ ಠಾಣೆಗೆ ಬಂದಿದ್ದರೂ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಆತನನ್ನು ಗುರುತಿಸಿರಲಿಲ್ಲ.

ನಂತರ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನು ಕಂಡ ಮಧುರ್ಜ್ಯ, ತನ್ನನ್ನು ಗುರುತಿಸಬಹುದೆಂಬ ಭಯದಿಂದ ಆಧಾರ್ ಕಾರ್ಡ್‌ ಪಡೆಯದೇ ಠಾಣೆಯಿಂದ ಓಡಿ ಹೋಗಿದ್ದಾನೆ. ಪೊಲೀಸರು ಆತನನ್ನು ಹಿಂಬಾಲಿಸಿಲ್ಲ ಎನ್ನಲಾಗಿದೆ.

ಬಳಿಕ ಪೆರುಂಬಾವೂರು ಪಟ್ಟಣಕ್ಕೆ ತೆರಳಿದ ಆರೋಪಿ, ಪರಿಚಯವಿದ್ದ ಮೊಬೈಲ್‌ ಅಂಗಡಿಯೊಂದಕ್ಕೆ ಹೋಗಿ ಊರಿಗೆ ತೆರಳಲು ಹಣ ಸಾಲವಾಗಿ ನೀಡುವಂತೆ ಅಂಗಡಿ ಮಾಲೀಕರನ್ನು ಕೇಳಿದ್ದಾನೆ. ಆದರೆ ಅಂಗಡಿ ಮಾಲೀಕರು ಹಣ ನೀಡಲು ನಿರಾಕರಿಸಿದ್ದಾರೆ.

ಇದೇ ವೇಳೆ, 24 ಗಂಟೆಗಳ ಭದ್ರತೆಯಲ್ಲಿರುವ ಸಬ್‌ಜೈಲಿನ 10ನೇ ಸೆಲ್‌ನಿಂದ ಆರೋಪಿ ಪರಾರಿಯಾಗಿರುವ ಘಟನೆ ಕುರಿತು ಜೈಲು ಎಡಿಜಿಪಿ ವರದಿ ಕೇಳಿದ್ದಾರೆ. ಕರ್ತವ್ಯದಲ್ಲಿದ್ದ ವಾರ್ಡನ್‌ಗಳ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement