ಕಾಸರಗೋಡು : ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಂಡುಬಂದಿರುವ 'ಆಧ್ಯಾತ್ಮಿಕ ದೋಷಗಳು' ಹಾಗೂ 'ವಾಗ್ದೋಷ'ಗಳ ನಿವಾರಣೆಗಾಗಿ ತಿರುವಿದಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಕೊಲ್ಲೂರು, ಕಾಸರಗೋಡು ಸಹಿತ 25 ಕ್ಷೇತ್ರಗಳಲ್ಲಿ ವಿಶೇಷ ಪರಿಹಾರ ಪೂಜೆಗಳನ್ನು ಆರಂಭಿಸಿದೆ. ಟಿಡಿಬಿ ಕಾರ್ಯನಿರ್ವಾಹಕ ಸದಸ್ಯ ಪಿ.ಎಸ್. ಶಾಂತಕುಮಾರ್ ಹಾಗೂ ಆಡಳಿತಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ಜರುಗುತ್ತಿವೆ.
2018ರಲ್ಲಿ ಶಬರಿಮಲೆಯಲ್ಲಿ ನಡೆದಿದ್ದ ಅಷ್ಟಮಂಗಳ ದೇವಪ್ರಶ್ನೆಯಲ್ಲಿ ಸನ್ನಿಧಾನದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ದೋಷಗಳು ಮತ್ತು ವಾಗ್ದೋಷಗಳು ಪತ್ತೆಯಾಗಿದ್ದವು. ಆಗಲೇ ಪರಿಹಾರ ಪೂಜೆಗಳನ್ನು ಸೂಚಿಸಲಾಗಿದ್ದರೂ, ಅವು ನೆರವೇರಿರಲಿಲ್ಲ. ಆದರೆ, ಶಬರಿಮಲೆ ಚಿನ್ನ ಲೂಟಿ ವಿವಾದ ಹಾಗೂ ಟಿಡಿಬಿ ಮಾಜಿ ಅಧ್ಯಕ್ಷರ ಬಂಧನದಂತಹ ಸರಣಿ ಬೆಳವಣಿಗೆಗಳ ಬೆನ್ನಲ್ಲೇ ದೇವಸ್ವಂ ಮಂಡಳಿ, ತುರ್ತಾಗಿ ದೋಷ ಪರಿಹಾರ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮೊದಲ ಪೂಜೆ ನೆರವೇರಿದೆ. ವಾಕ್ ದೋಷ ಪರಿಹಾರಕ್ಕಾಗಿ ದೇವಿಗೆ ಚಿನ್ನದ ನಾಲಿಗೆ, ಗಂಟೆ ಹಾಗೂ ತಾಳೆಗರಿಯ ಮೇಲೆ ಬರೆಯಲು ಬಳಸುವ ಸಾಂಪ್ರದಾಯಿಕ ಲೇಖನಿಯನ್ನು ಅರ್ಪಿಸಲಾಗಿದೆ. ಮುಂಬರುವ ಶರನ್ನವರಾತ್ರಿ ಹಬ್ಬದ ಬಳಿಕ ಕೊಲ್ಲೂರಿನಲ್ಲಿ ಮಹಾಪೂಜೆ ನಡೆಯಲಿದೆ. ಕಾಸರಗೋಡು ಜಿಲ್ಲೆಯ ಬೇಳ ಸಮೀಪದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆಯನ್ನು ನೆರವೇರಿಸಿ, ಕಾಣಿಕೆಯನ್ನು ಸಮರ್ಪಿಸಲಾಗಿದೆ.
ಕೇರಳದ ಕಣ್ಣೂರು ಎಡಕ್ಕಾಡ್ ಮಹಾವಿಷ್ಣು ದೇವಸ್ಥಾನ, ತ್ರಿಶೂರ್ ವಡಕ್ಕುಂನಾಥನ್ ದೇವಸ್ಥಾನ ಮತ್ತು ಇರಿಂಜಾಲಕುಡದ ಕೂಡಲ್ ಮಾಣಿಕ್ಯಂ ದೇವಸ್ಥಾನ ಸೇರಿದಂತೆ ಒಟ್ಟು 25 ಪ್ರಮುಖ ದೇವಾಲಯಗಳಲ್ಲಿ ಶಬರಿಮಲೆಯ ಶುದ್ಧೀಕರಣಕ್ಕಾಗಿ ವಿಧಿವಿಧಾನಗಳು ನಡೆಯಲಿವೆ. ಮುಂಬರುವ ಮಂಡಲ ಪೂಜಾ ಮಹೋತ್ಸವದ ಅವಧಿ ಆರಂಭವಾಗುವ ಮುನ್ನ ಈ ಎಲ್ಲಾ 25 ಕ್ಷೇತ್ರಗಳಲ್ಲಿ ಪರಿಹಾರ ಪೂಜೆಗಳನ್ನು ಪೂರ್ಣಗೊಳಿಸಲು ಟಿಡಿಬಿ ನಿರ್ಧರಿಸಿದೆ.
ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments