ಕಾಸರಗೋಡು : ಕಾಸರಗೋಡು ಸಹಿತ ಕೇರಳದ 11 ಜಿಲ್ಲೆಗಳಲ್ಲಿ ಮಿಂಚಿನ ಪ್ರವಾಹ ಸಂಭವಿಸುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ಬುಧವಾರ ಬೆಳಿಗ್ಗೆ 8.30 ಗಂಟೆಯವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ. ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೋಟಾಯಂ, ಇಡುಕ್ಕಿ, ಎರ್ನಾಕುಲಂ, ಮಲಪ್ಪುರಂ, ಕೋಝಿಕ್ಕೋಡು, ವಯನಾಡು, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಫ್ಲ್ಯಾಶ್ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ.
ಕಾಸರಗೋಡು ಜಿಲ್ಲೆಯ ಉಪ್ಪಳ ನದಿಯಲ್ಲಿ ನೀರಿನ ಮಟ್ಟ ಅಪಾಯದ ಮಟ್ಟವನ್ನು ಮೀರಿ ಏರಿಕೆಯಾಗಿದೆ. ಅಲ್ಲದೆ ಮಧೂರು, ಪುತ್ತಿಗೆ ಹಾಗೂ ಮಂಜೇಶ್ವರ ನದಿಗಳಲ್ಲೂ ನೀರಿನ ಮಟ್ಟ ಎಚ್ಚರಿಕೆ ಮಟ್ಟಕ್ಕಿಂತ ಮೇಲೇರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ಕಾಸರಗೋಡು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಫ್ಲ್ಯಾಶ್ ಪ್ರವಾಹದ ಎಚ್ಚರಿಕೆಯನ್ನೂ ಹೊರಡಿಸಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪುತ್ತಿಗೆ ಪಂಚಾಯತಿನ ಮುಗು ಭಾಗದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆಯ ನೀರು ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಿಗೆ ನುಗ್ಗಿರುವ ಪರಿಣಾಮ ಸ್ಥಳೀಯ ನಿವಾಸಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಹಲವು ಕಡೆಗಳಲ್ಲಿ ನೀರು ನಿಂತು ಸಂಚಾರಕ್ಕೂ ತೊಂದರೆ ಉಂಟಾಗಿದೆ. ಸ್ಥಳೀಯ ಪುತ್ತಿಗೆ ಶ್ರೀಸುಬ್ರಾಯ ಕ್ಷೇತ್ರದ ಮುಂಭಾಗದಲ್ಲಿರುವ ನದಿ ತ್ರಿವೇಣಿ ಸಂಗಮವಾಗಿ ಹರಿಯುತ್ತಿದೆ.
ನದಿ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ವಿಪತ್ತು ನಿರ್ವಹಣಾ ಇಲಾಖೆ ಮನವಿ ಮಾಡಿದೆ.
ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost


0 Comments