ಸಾಂದರ್ಭಿಕ ಚಿತ್ರ
"ಆರೋಗ್ಯವೇ ಭಾಗ್ಯ" ಎಂಬುದು ಕೇವಲ ಗಾದೆ ಮಾತಲ್ಲ, ಅದು ಜೀವನದ ಪರಮ ಸತ್ಯ. ಮನುಷ್ಯ ಎಷ್ಟೇ ಸಂಪತ್ತು, ಅಂತಸ್ತು ಹೊಂದಿದ್ದರೂ ದೈಹಿಕ ಮತ್ತು ಮಾನಸಿಕ ಆರೋಗ್ಯವಿಲ್ಲದಿದ್ದರೆ ಯಾವುದನ್ನೂ ಅನುಭವಿಸಲು ಸಾಧ್ಯವಿಲ್ಲ. ಮನುಷ್ಯನ ದೈನಂದಿನ ಚಟುವಟಿಕೆಗಳು, ಸಾಧನೆ ಮತ್ತು ನೆಮ್ಮದಿ ಅಡಗಿರುವುದೇ ಅವನ ದೈಹಿಕ ಮತ್ತು ಮಾನಸಿಕ ಸದೃಢತೆಯಲ್ಲಿ. ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದಿದ್ದರೂ, ಉತ್ತಮ ಆರೋಗ್ಯವಿಲ್ಲದಿದ್ದರೆ ಎಲ್ಲವೂ ಶೂನ್ಯ. ಪ್ರತಿಯೊಬ್ಬ ಮಾನವನಿಗೂ ಆರೋಗ್ಯಪೂರ್ಣ ಜೀವನ ನಡೆಸುವ ಹಕ್ಕು ಇದೆ ಎಂಬುದನ್ನು ನೆನಪಿಸಲು ಮತ್ತು ಜಾಗತಿಕ ಆರೋಗ್ಯ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು, ಪ್ರತಿವರ್ಷ ಏಪ್ರಿಲ್ 7 ರಂದು 'ವಿಶ್ವ ಆರೋಗ್ಯ ದಿನ'ವನ್ನು ಆಚರಿಸಲಾಗುತ್ತದೆ.
1948 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO) ಮೊದಲ ಬಾರಿಗೆ ವಿಶ್ವ ಆರೋಗ್ಯ ಸಭೆಯನ್ನು ನಡೆಸಿತು. ಅದರ ಸ್ಮರಣಾರ್ಥವಾಗಿ 1950 ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಒಂದು ನಿರ್ದಿಷ್ಟ ವಿಷಯವನ್ನು (Theme) ಇಟ್ಟುಕೊಂಡು ಆ ಬಗ್ಗೆ ಜಗತ್ತಿನಾದ್ಯಂತ ಅರಿವು ಮೂಡಿಸಲಾಗುತ್ತದೆ.
ಇಂದಿನ ಬದಲಾದ ಜೀವನಶೈಲಿ, ಕಲುಷಿತ ಪರಿಸರ ಮತ್ತು ಮಾನಸಿಕ ಒತ್ತಡಗಳು ಮನುಷ್ಯನನ್ನು ಕಾಯಿಲೆಗಳ ಕೂಪಕ್ಕೆ ತಳ್ಳುತ್ತಿವೆ.
ಸಾಂಕ್ರಾಮಿಕ ರೋಗಗಳು: ಕೋವಿಡ್-19 ನಂತರದ ಜಗತ್ತಿನಲ್ಲಿ ಹೊಸ ಹೊಸ ವೈರಸ್ಗಳ ಭೀತಿ ಹೆಚ್ಚಾಗಿದೆ.
ಜೀವನಶೈಲಿ ಕಾಯಿಲೆಗಳು: ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಯುವಜನರನ್ನೂ ಕಾಡುತ್ತಿವೆ.
ಮಾನಸಿಕ ಆರೋಗ್ಯ: ದೈಹಿಕ ಆರೋಗ್ಯದಷ್ಟೇ ಮುಖ್ಯವಾದ ಮಾನಸಿಕ ನೆಮ್ಮದಿಯನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯ ಕಳೆದುಕೊಳ್ಳುತ್ತಿದ್ದಾನೆ.
ಸದೃಢ ಆರೋಗ್ಯಕ್ಕಾಗಿ ನಾವು ಕೆಲವು ಸರಳ ಹಂತಗಳನ್ನು ಪಾಲಿಸಬೇಕಿದೆ:
ಸಮತೋಲಿತ ಆಹಾರ: ಸಂಸ್ಕರಿಸಿದ ಆಹಾರವನ್ನು ಬಿಟ್ಟು, ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಕು.
ದೈಹಿಕ ಚಟುವಟಿಕೆ: ದಿನನಿತ್ಯ ಕನಿಷ್ಠ 30 ನಿಮಿಷಗಳ ನಡಿಗೆ ಅಥವಾ ವ್ಯಾಯಾಮ ಅತಿ ಅಗತ್ಯ.
ವೈಯಕ್ತಿಕ ಸ್ವಚ್ಛತೆ: ಕಾಲಕಾಲಕ್ಕೆ ಕೈ ತೊಳೆಯುವುದು ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ರೋಗಗಳನ್ನು ದೂರವಿಡುತ್ತದೆ.
ವೈದ್ಯಕೀಯ ತಪಾಸಣೆ: ರೋಗ ಲಕ್ಷಣಗಳಿಗಾಗಿ ಕಾಯದೆ, ವರ್ಷಕ್ಕೊಮ್ಮೆ ಸಂಪೂರ್ಣ ದೇಹದ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
ಒಟ್ಟಾರೆಯಾಗಿ ಹೇಳುವುದಾದರೆ, ಆರೋಗ್ಯ ಎಂಬುದು ಕೇವಲ ರೋಗಗಳ ಅನುಪಸ್ಥಿತಿಯಲ್ಲ, ಅದು ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಸದೃಢವಾಗಿರುವುದು. ರೋಗಮುಕ್ತ ಶರೀರವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಮತ್ತು ಜವಾಬ್ದಾರಿಯಾಗಿದೆ. ಅದು ಕೇವಲ ವೈದ್ಯರು ಅಥವಾ ಆಸ್ಪತ್ರೆಗಳಿಗೆ ಸಂಬಂಧಿಸಿದ ವಿಷಯವಲ್ಲ. ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಜವಾಬ್ದಾರಿಯಾಗಿದೆ. ಕೇವಲ ವರ್ಷಕ್ಕೊಮ್ಮೆ ಆರೋಗ್ಯ ದಿನವನ್ನು ಆಚರಿಸುವುದರಿಂದ ನಮ್ಮ ಗುರಿ ಪೂರ್ಣವಾಗುವುದಿಲ್ಲ; ಬದಲಿಗೆ, ದಿನನಿತ್ಯದ ಜೀವನದಲ್ಲಿ ಶಿಸ್ತುಬದ್ಧ ಆಹಾರ ಪದ್ಧತಿ ಮತ್ತು ದೈಹಿಕ ಶ್ರಮವನ್ನು ಅಳವಡಿಸಿಕೊಳ್ಳಬೇಕು. "ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದಂತೆ ತಡೆಯುವುದು ಮೇಲು" (Prevention is better than cure) ಎಂಬ ಮಾತಿನಂತೆ ನಾವು ಎಚ್ಚೆತ್ತುಕೊಳ್ಳಬೇಕು. "ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನ್ನ ಹೊತ್ತುಕೊಂಡು ಹೋಗಿ" ಎಂಬ ಹಿರಿಯರ ಮಾತಿನಲ್ಲೇ ಆರೋಗ್ಯದ ರಹಸ್ಯವಿದೆ. ಆರೋಗ್ಯವಂತ ವ್ಯಕ್ತಿಗಳಿಂದ ಮಾತ್ರ ಆರೋಗ್ಯವಂತ ಕುಟುಂಬ, ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ.
ಸಂಗ್ರಹ ಲೇಖನ : ವನಜಾಕ್ಷಿ ಪಿ ಚೆಂಬ್ರಕಾನ
ಜಾಹೀರಾತು


0 Comments