ರಾಂಚಿ: ಮಗನ ರೋಗ ವಾಸಿಯಾಗಲೆಂದು 12 ವರ್ಷದ ಮಗಳನ್ನು ಬಲಿಕೊಟ್ಟು ಬಳಿಕ ತಾಯಿಯೇ ಪೊಲೀಸರಿಗೆ ರೇಪ್ ಎಂದು ದೂರು ದಾಖಲಿಸಿರುವ ಘಟನೆ ಜಾರ್ಖಂಡ್ನ ಹಜಾರಿಬಾಗ್ನಲ್ಲಿ ನಡೆದಿದೆ. ಪೊಲೀಸರು ಮೃತಳ ತಾಯಿ ರೇಶ್ಮಿ ದೇವಿ (25), ಆಕೆಯ ಪ್ರಿಯಕರ ಭೀಮ್ ರಾಮ್ (40) ಹಾಗೂ ಮಾಟಗಾತಿ ಶಾಂತಿ ದೇವಿಯನ್ನು (55) ಬಂಧಿಸಿದ್ದಾರೆ.
ಆರೋಪಿ ಮಹಿಳೆಯ ಏಕೈಕ ಪುತ್ರ ಮಾನಸಿಕ ಹಾಗೂ ದೈಹಿಕ ಕಾಯಿಲೆಯಿಂದ ಬಳಲುತ್ತಿದ್ದು, ಮಗನ ಕಾಯಿಲೆ ಗುಣಪಡಿಸಲು ತನ್ನ ಗ್ರಾಮದ ಶಾಂತಿ ದೇವಿ ಎಂಬ ತಾಂತ್ರಿಕಳನ್ನು ಪದೇ ಪದೇ ಭೇಟಿ ಮಾಡುತ್ತಿದ್ದಳು. ಮಗನ ಖಾಯಿಲೆ ಗುಣವಾಗಬೇಕಾದರೆ ಒಬ್ಬ ಕನ್ಯೆಯನ್ನು ಬಲಿ ನೀಡಬೇಕು ಎಂದು ಮಾಂತ್ರಿಕಳು ರೇಷ್ಮಿ ದೇವಿಗೆ ತಿಳಿಸಿದ್ದಳು. ಮಾಂತ್ರಿಕಳ ಮಾತು ನಂಬಿದ ತಾಯಿ, ತನ್ನ ಸ್ವಂತ ಮಗಳನ್ನೇ ಬಲಿ ಕೊಡಲು ನಿರ್ಧರಿಸಿದಳು.
ಮಾರ್ಚ್ 24 ರಂದು ರಾಮನವಮಿಯಂದು ಗ್ರಾಮಸ್ಥರು ಮಂಗಳ ಜುಲುಸ್ ಸಂಭ್ರಮದಲ್ಲಿ ಮಗ್ನರಾಗಿದ್ದರು. ಆ ದಿನದ ಅಷ್ಟಮಿ ರಾತ್ರಿಯಂದು ಈ ಕೃತ್ಯ ನಡೆದಿದೆ. ಮಾಂತ್ರಿಕಳು ಶಾಂತಿ ದೇವಿಯ ಮನೆಯಲ್ಲಿ ರೇಷ್ಮಿ ದೇವಿ ಮತ್ತು ಭೀಮ್ ರಾಮ್ ಸೇರಿ ಬಾಲಕಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ ಎನ್ನಲಾಗಿದೆ.
ಮಾರನೇ ದಿನ ಬೆಳಿಗ್ಗೆ ಬಾಲಕಿಯ ಶವ ಪತ್ತೆಯಾದ ನಂತರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿ, ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು ಮರಣೋತ್ತರ ಹಾಗೂ ಫೋರೆನ್ಸಿಕ್ ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ಅತ್ಯಾಚಾರ ಆಗಿರುವುದು ಸಾಬೀತಾಗಿಲ್ಲ. ತಾಯಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಈ ಕಾಲಘಟ್ಟದಲ್ಲೂ ಕುರುಡು ನಂಬಿಕೆ ಮತ್ತು ಮೂಢನಂಬಿಕೆಗಳು ಎಷ್ಟೊಂದು ಆಳವಾಗಿ ಬೇರೂರಿದೆ ಎಂಬುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿಯಾಗಿದೆ.

0 Comments