ಕಾಸರಗೋಡು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಕಾಸರಗೋಡು ಸಂಯುಕ್ತ ಮುಸ್ಲಿಂ ಜಮಾಅತ್ ಖಾಜಿಯಾಗಿದ್ದ ಪ್ರೊ. ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ (81) ಅವರು ಗುರುವಾರ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಮಲಪ್ಪುರ ಜಿಲ್ಲೆಯ ಪೆರಿಂದಲ್ ಮಣ್ಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆಯನ್ನು ಸ್ವಗ್ರಾಮವಾದ ಮಲಪ್ಪುರಂ ಜಿಲ್ಲೆಯ ತಿರೂರ್ಕಾಡ್ ಜುಮಾ ಮಸೀದಿ ಕಬರಸ್ತಾನದಲ್ಲಿ ನೆರವೇರಿಸಲಾಗುತ್ತದೆ.
2016ರ ಫೆಬ್ರವರಿ 27ರಂದು ಚೆರಿಶ್ಶೇರಿ ಸೈನುದ್ದೀನ್ ಮುಸ್ಲಿಯಾರ್ ಅವರ ನಿಧನದ ಬಳಿಕ ಇವರು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಯಾಗಿಆಯ್ಕೆಯಾಗಿದ್ದರು. ಪ್ರಸ್ತುತ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ರಾಷ್ಟ್ರೀಯ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದರು. 2009ರಲ್ಲಿ ಸಮಸ್ತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿದ್ದ ಅವರು 2003ರಿಂದ 2006ರವರೆಗೆ ಕೇರಳ ಹಜ್ ಸಮಿತಿ ಅಧ್ಯಕ್ಷರಾಗಿ ಹಾಗೂ 2006ರಿಂದ 2009ರವರೆಗೆ ಭಾರತ ಹಜ್ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಚಿವರಲ್ಲದ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಕೇರಳ ಹಜ್ ಸಮಿತಿಯ ಅಧ್ಯಕ್ಷರಾಗಿದ್ದ ಗೌರವವೂ ಅವರಿಗೆ ಸಲ್ಲುತ್ತದೆ.
1945ರಲ್ಲಿ ಮಲಪ್ಪುರಂ ಜಿಲ್ಲೆಯ ತಿರೂರ್ಕಾಡ್ನಲ್ಲಿ ಕುನ್ನತ್ ಮೂಸ ಹಾಜಿ ಮತ್ತು ಮಾಡಂಬಿ ಇಯ್ಯಾತ್ತುಟ್ಟಿ ದಂಪತಿಯ ಪುತ್ರರಾಗಿ ಜನಿಸಿದ ಅವರು, ಕೇವಲ 16ನೇ ವಯಸ್ಸಿನಲ್ಲೇ ಮಹಲ್ಲಿನ ಖತೀಬ್ ಆಗಿ ನೇಮಕಗೊಂಡಿದ್ದರು. 20ನೇ ವಯಸ್ಸಿನಲ್ಲಿ ಮಹಲ್ಲಿನ ಖಾಜಿಯಾಗಿಯೂ ಸೇವೆ ಆರಂಭಿಸಿದ್ದರು. ಪಟ್ಟಿಕ್ಕಾಡಿನ ಜಾಮಿಯಾ ನೂರಿಯ್ಯ ಅರಬಿಕ್ ಕಾಲೇಜಿನಲ್ಲಿ ‘ಫೈಝಿ’ ಪದವಿ ಪಡೆದ ಬಳಿಕ ಮೀನಾರ್ಕುಳಿ ದರ್ಸ್ನಲ್ಲಿ ಬೋಧನಾ ಸೇವೆ ಆರಂಭಿಸಿದರು. 1979ರಲ್ಲಿ ಜಾಮಿಯಾ ನೂರಿಯ್ಯದಲ್ಲಿ ಉಪನ್ಯಾಸಕರಾಗಿ ಸೇರಿ,ಸಂಸ್ಥೆಯು 2003ರಿಂದ ಅದೇ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
2013ರಿಂದ ಕಾಸರಗೋಡು ಸಂಯುಕ್ತ ಮುಸ್ಲಿಂ ಜಮಾಅತ್ ಖಾಜಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ. ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ಅವರ ನಿಧನಕ್ಕೆ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ವಲಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

0 Comments