ಕಾಸರಗೋಡು : ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ ಆರೋಪದಡಿ ಬದಿಯಡ್ಕದ ಇಬ್ಬರು ಸೇರಿದಂತೆ ಮೂವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಎಆರ್ ಕ್ಯಾಂಪ್ನ ಸಂದೀಪ್ (38) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಸಮೀಪದ ನೆಕ್ರಾಜೆ ನಿವಾಸಿಗಳಾದ ಸಫ್ವಾನ್, ಅಮೀರ್ ಹಾಗೂ ಕಲ್ಲೂರಾವಿ ನಿವಾಸಿ ಮೊಹಮ್ಮದ್ ಶಮೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಮುಂಜಾನೆ ಸುಮಾರು 1.30ರ ವೇಳೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ. ಕಂಟ್ರೋಲ್ ರೂಂ ಎಸ್ಐ ನೇತೃತ್ವದ ಪೊಲೀಸ್ ತಂಡ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕರಂದಕ್ಕಾಡು ಕಡೆಯಿಂದ ಹೆಲ್ಮೆಟ್ ಧರಿಸದೆ ಬೈಕ್ನಲ್ಲಿ ಬಂದ ಮೂವರನ್ನು ತಡೆದು ಪರಿಶೀಲಿಸಿದ ವೇಳೆ ಬೈಕ್ ಸವಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸಂದೀಪ್ ಮುಂದಾದಾಗ, ಆರೋಪಿಗಳಲ್ಲೊಬ್ಬ ಚಾಕುವಿನಿಂದ ಅವರ ಕುತ್ತಿಗೆಗೆ ಇರಿಯಲು ಯತ್ನಿಸಿದ್ದಾನೆ. ಸಂದೀಪ್ ಕೈಯಿಂದ ತಡೆದ ಪರಿಣಾಮ ಅವರ ಬಲಗೈಗೆ ಗಾಯವಾಗಿದೆ.
ತಕ್ಷಣವೇ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಧಾವಿಸಿ ಮೂವರನ್ನೂ ವಶಕ್ಕೆ ಪಡೆದರು. ಆರೋಪಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.

0 Comments