ಕಾಸರಗೋಡು : ಖಾಸಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಸಮೀಪದ ಕೂಡ್ಲು ಮೀಪುಗುರಿ ಎಂಬಲ್ಲಿ ನಡೆದಿದೆ. ಮೃತರನ್ನು ಕೂಡ್ಲು ಮೀಪುಗುರಿ ಸಮೀಪದ ಕಾಳ್ಯಂಗಾಡು ನಿವಾಸಿ, ಸೂರ್ಯ ಎಂಬವರ ಪತ್ನಿ ಶ್ಯಾಮಲ (50) ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಲಗುವ ಕೋಣೆಯ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶ್ಯಾಮಲ ಪತ್ತೆಯಾಗಿದ್ದಾರೆ. ಅವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಶ್ಯಾಮಳ ಅವರು ಬಹುಕಾಲದಿಂದ ಕಾಲಿನ ತೀವ್ರ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿತ್ತು. ಕಾಸರಗೋಡು ನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೃತರು ಪುತ್ರಿ ಸುಸ್ಮಿತ, ಪುತ್ರ ಸುಶಾಂತ್ ಸಹೋದರರರಾದ ಪುಷ್ಪರಾಜ್, ಜನಾರ್ದನನ್, ಪದ್ಮಾವತಿ, ಅಂಬಿಕಾ, ಸುಮಲತಾ ಹಾಗೂ ರಾಘವನ್ ಎಂಬಿವರನ್ನಗಲಿದ್ದಾರೆ.

0 Comments