ಆಲಪ್ಪುಳ : ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿದ್ದ ದಂಪತಿಯ ಬದುಕಿನಲ್ಲಿ ಸಂಭವಿಸಿದ ದುರಂತ ಮನಕಲಕುವಂತಿದೆ. ಗರ್ಭಿಣಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ದೋಹಾದಿಂದ ಸ್ವದೇಶಕ್ಕೆ ಹೊರಟಿದ್ದ ಯುವಕ, ಬೆಂಗಳೂರಿನ ಲಾಡ್ಜ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಮೃತರನ್ನು ಎಡತ್ವ ಕೊಡುಪುನ್ನ ನಿವಾಸಿ ಪಿ.ಎಸ್. ಸನುಕ್ಕುಟ್ಟನ್ (30) ಎಂದು ಗುರುತಿಸಲಾಗಿದೆ. ಇವರ ಪತ್ನಿ, ಮಾವೇಲಿಕ್ಕರ ಉಂಬರ್ನಾಡು ನಿವಾಸಿ ಹರೀಷ್ಮಾ (27) ಅವರನ್ನು ಎರಡು ದಿನಗಳ ಹಿಂದೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿತ್ತು. ಮೂರು ತಿಂಗಳ ಗರ್ಭಿಣಿಯಾಗಿದ್ದ ಹರೀಷ್ಮಾ ಅವರ ಅಂತ್ಯಕ್ರಿಯೆ ಮಾವೇಲಿಕ್ಕರದಲ್ಲಿ ನೆರವೇರಿಸಲಾಗಿತ್ತು.
ನಾಲ್ಕು ತಿಂಗಳ ಹಿಂದಷ್ಟೇ ಇವರ ವಿವಾಹವಾಗಿದ್ದು, ಒಂದು ತಿಂಗಳ ಹಿಂದೆ ಸನುಕ್ಕುಟ್ಟನ್ ಉದ್ಯೋಗ ನಿಮಿತ್ತ ದೋಹಾಗೆ ತೆರಳಿದ್ದರು. ಪತ್ನಿಯ ಸಾವಿನ ಸುದ್ದಿ ತಿಳಿದು ತಕ್ಷಣವೇ ಸ್ವದೇಶಕ್ಕೆ ಪ್ರಯಾಣ ಬೆಳೆಸಿದ್ದ ಅವರು, ಸಂಪರ್ಕ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಬಳಿಕ ನೆಡುಂಬಾಶೇರಿ ವಿಮಾನ ನಿಲ್ದಾಣಕ್ಕೆ ತಲುಪುವುದಾಗಿ ಕುಟುಂಬಕ್ಕೆ ತಿಳಿಸಿದ್ದರು.
ಈ ಮಾಹಿತಿ ಮೇರೆಗೆ ಕುಟುಂಬಸ್ಥರು ನೆಡುಂಬಾಶೇರಿ ವಿಮಾನ ನಿಲ್ದಾಣದಲ್ಲಿ ಕಾದರೂ ಅವರು ತಲುಪಲಿಲ್ಲ. ಬಳಿಕ ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಅಲ್ಲಿಗೆ ಬಂದಿರುವುದು ದೃಢಪಟ್ಟಿತು. ಮೊಬೈಲ್ ಸಂಪರ್ಕವೂ ಕಡಿತಗೊಂಡಿದ್ದರಿಂದ ಕುಟುಂಬಸ್ಥರು ಬೆಂಗಳೂರಿಗೆ ತೆರಳಿ, ಅಲ್ಲಿನ ಪೊಲೀಸರು ಹಾಗೂ ಮಲಯಾಳಿ ಸಂಘಟನೆಯ ನೆರವು ಕೋರಿದರು.
ಇದೇ ವೇಳೆ ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಮಲಯಾಳಿ ಯುವಕನ ಮೃತದೇಹ ಪತ್ತೆಯಾದ ಮಾಹಿತಿ ಪೊಲೀಸರಿಗೆ ಲಭಿಸಿತು. ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೃತಪಟ್ಟವರು ಸನುಕ್ಕುಟ್ಟನ್ ಎಂಬುದನ್ನು ದೃಢಪಡಿಸಿದರು. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

0 Comments