ತಿರುವನಂತಪುರ: ಕೇರಳದಲ್ಲಿ ಭಾರೀ ಮಳೆಯ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ (IMD) ಮಳೆ ಎಚ್ಚರಿಕೆಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಈಗಾಗಲೇ ಘೋಷಿಸಲಾಗಿದ್ದ ಆರು ಜಿಲ್ಲೆಗಳ ಜೊತೆಗೆ ಪಾಲಕ್ಕಾಡು, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ವಿಸ್ತರಿಸಲಾಗಿದ್ದು, ಒಟ್ಟು ಒಂಬತ್ತು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.
ಪ್ರಸ್ತುತ ವಯನಾಡು, ಕೋಝಿಕ್ಕೋಡ್, ಮಲಪ್ಪುರ, ತ್ರಿಶೂರ್, ಎರ್ನಾಕುಳಂ, ಇಡುಕ್ಕಿ, ಪಾಲಕ್ಕಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯ ಸಾಧ್ಯತೆ ಇದೆ. ಪತ್ತನಂತಿಟ್ಟ, ಆಲಪ್ಪುಳ, ಮತ್ತು ಕೊಟ್ಟಾಯಂ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಾಸರಗೋಡು, ಕಣ್ಣೂರು ಮತ್ತು ಕೋಝಿಕ್ಕೋಡ್ ಕರಾವಳಿಯಲ್ಲಿ ಎತ್ತರದ ಅಲೆಗಳು ಹಾಗೂ ಸಮುದ್ರ ಅಬ್ಬರಿಸುವ ಸಾಧ್ಯತೆ ಇರುವುದರಿಂದ ವಿಶೇಷ ಎಚ್ಚರಿಕೆ ನೀಡಲಾಗಿದೆ. ಕರಾವಳಿ ನಿವಾಸಿಗಳು ಹಾಗೂ ಮೀನುಗಾರರು ಹೆಚ್ಚಿನ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಕೇರಳ–ಕರ್ನಾಟಕ–ಲಕ್ಷದ್ವೀಪ ಕರಾವಳಿಯಲ್ಲಿ ಇಂದು ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ವಯನಾಡಿನಲ್ಲಿ ಬೆಳಗ್ಗೆಯಿಂದಲೇ ಮಳೆಯಾಗುತ್ತಿದ್ದು, ಉತ್ತರ ಕೇರಳದಲ್ಲಿ ಇಂದು ಹಾಗೂ ನಾಳೆಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆರೆಂಜ್ ಅಲರ್ಟ್ ಇರುವ ಪ್ರದೇಶಗಳಲ್ಲಿ 204 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪಶ್ಚಿಮ ಗಾಳಿಯ ಬಲ ಹೆಚ್ಚಿರುವುದು ಹಾಗೂ ಕಡಿಮೆ ಒತ್ತಡದ ವಲಯ ಸಕ್ರಿಯವಾಗಿರುವುದೇ ಭಾರೀ ಮಳೆಗೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.
ಈಗಾಗಲೇ ಭಾರೀ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಹಾನಿ ಸಂಭವಿಸಿದೆ. ಕೋಝಿಕ್ಕೋಡ್ ಜಿಲ್ಲೆಯ ಚೆಕ್ಯಾಡ್ನಲ್ಲಿ ಮಿಂಚು ಸಹಿತ ಬಿರುಗಾಳಿಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿದ್ದು, ಹಲವು ಮನೆಗಳ ಮೇಲ್ಛಾವಣಿಗೆ ಹಾನಿಯಾಗಿದೆ. ಕಾಸರಗೋಡಿನ ಕಳ್ಳಾರ್ ಪ್ರದೇಶದಲ್ಲಿಯೂ ಮನೆಯ ಮೇಲ್ಛಾವಣಿ ಕುಸಿದಿದೆ. ಕಾರಶ್ಶೇರಿಯಲ್ಲಿ ಸುಮಾರು 70 ವರ್ಷಗಳಷ್ಟು ಹಳೆಯ ಸಾರ್ವಜನಿಕ ಬಾವಿಯೊಂದು ಏಕಾಏಕಿ ಕುಸಿದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಡುಕ್ಕಿಯ ಮುನ್ನಾರ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭೂ ಕುಸಿತ ಸಂಭವಿಸಿರುವುದರಿಂದ ಅಪಾಯದ ಪರಿಸ್ಥಿತಿ ಮುಂದುವರಿದಿದೆ.
ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗುಡ್ಡಗಾಡು, ನದಿ ಹಾಗೂ ಕರಾವಳಿ ಪ್ರದೇಶದ ಅಪಾಯ ವಲಯಗಳಲ್ಲಿ ವಾಸಿಸುವವರು ಅಧಿಕಾರಿಗಳ ಸೂಚನೆ ಪಾಲಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಇದೇ ವೇಳೆ, ವಯನಾಡಿನ ಕಳ್ಳಾಡಿಯಲ್ಲಿ ಸಂಭವಿಸಿದ ಭೂ ಕುಸಿತವು ಸಾಮಾನ್ಯ ಸ್ವಾಭಾವಿಕ ಭೂಕುಸಿತವಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕಿ ನೀತಾ ಕೆ. ಗೋಪಾಲ್ ತಿಳಿಸಿದ್ದಾರೆ. ಜಿಲ್ಲೆಗೆ ಮುಂಚಿತವಾಗಿಯೇ ಅಗತ್ಯ ಮಳೆ ಎಚ್ಚರಿಕೆ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ವಿಶೇಷವಾಗಿ ಗುಡ್ಡಗಾಡು ಪ್ರದೇಶದ ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅವರು ಸಲಹೆ ನೀಡಿದ್ದಾರೆ.

0 Comments