ಬದಿಯಡ್ಕ: ಕನ್ಯಪ್ಪಾಡಿಯಲ್ಲಿ ನಡೆದ ಹಸು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಬಂಧಿತರನ್ನು ಮಂಗಳೂರು ಜೋಕಟ್ಟೆ ನಿವಾಸಿ ರಸಿಕ್ (21) ಹಾಗೂ ಉಳ್ಳಾಲ ಅಲಿಕ್ಕುಲ್ನ ಮುಹಮ್ಮದ್ ಇರ್ಬಾಸ್ (26) ಎಂದು ಗುರುತಿಸಲಾಗಿದೆ. ತನಿಖಾ ತಂಡವು ಶುಕ್ರವಾರ ಮಧ್ಯಾಹ್ನ ಇಬ್ಬರನ್ನೂ ವಶಕ್ಕೆ ಪಡೆದಿದೆ.
ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದ್ದು, ಅವರನ್ನು ಬಂಧಿಸಲು ವಿಶೇಷ ತನಿಖೆ ಮುಂದುವರಿದಿದೆ. ಹಸುಗಳನ್ನು ಸಾಗಿಸಲು ಬಳಸಲಾಗಿದ್ದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೂನ್ 16ರಂದು ಮುಂಜಾನೆ ಸುಮಾರು 1.30ರ ವೇಳೆಗೆ ಕನ್ಯಪ್ಪಾಡಿಯ ರಹಮತ್ ಮಂಜಿಲ್ನ ನಿವಾಸಿ ಕೆ.ಎಂ. ಮೊಹಮ್ಮದ್ ಅವರ ಮನೆಯ ಮುಂಭಾಗದ ಅಂಗಡಿ ವರಾಂಡಾದಲ್ಲಿದ್ದ ಸುಮಾರು ₹30 ಸಾವಿರ ಮೌಲ್ಯದ ಎರಡು ಹಸುಗಳನ್ನು ಕಳವು ಮಾಡಲಾಗಿತ್ತು. ಸಂಜೆ ಮನೆಗೆ ಮರಳಿದ ಬಳಿಕ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹಸುಗಳನ್ನು ಕಾರಿನಲ್ಲಿ ಸಾಗಿಸುತ್ತಿರುವ ದೃಶ್ಯ ದಾಖಲಾಗಿರುವುದು ಪತ್ತೆಯಾಯಿತು. ಬಳಿಕ ಅವರು ಬದಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕನ್ಯಪ್ಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ದನ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

0 Comments