ಮಂಗಳೂರು : ಕೊಣಾಜೆ ನಡುಪದವು ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಬಸ್ಸೊಂದು ನಾಟೆಕಲ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಕಮರಿಗೆ ಉರುಳಿ ಬಿದ್ದಿದ್ದು, ದ್ವಿಚಕ್ರ ವಾಹನ ಸವಾರ, ಇನ್ಫೋಸಿಸ್ ಉದ್ಯೋಗಿ ದಾರುಣವಾಗಿ ಸಾವನ್ನಪ್ಪಿದ್ದು, ಹಿಂಬದಿಯಲ್ಲಿದ್ದ ಸಹೋದ್ಯೋಗಿ ಯುವತಿ ಸೇರಿದಂತೆ ಕಾಲೇಜು ಬಸ್ಸಿನಲ್ಲಿದ್ದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇನ್ಫೋಸಿಸ್ ಉದ್ಯೋಗಿ, ಚಿಕ್ಕಮಗಳೂರು ಕುವೆಂಪುನಗರದ ನಿವಾಸಿ ಪ್ರಜ್ವಲ್ ಅರ್ನಾಲ್ಡ್ (30) ಮೃತ ಯುವಕ. ಆತನ ಸಹೋದ್ಯೋಗಿ ಶಿವಮೊಗ್ಗ ಸಾಗರ ಮೂಲದ ಅಕ್ಷತಾ ಗಾಯಗೊಂಡಿದ್ದಾರೆ.
ಕೊಣಾಜೆ ಕಂಬಳಪದವಿನಲ್ಲಿರುವ ಇನ್ಫೋಸಿಸ್ ನಲ್ಲಿ ಬಿಪಿಒ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಜ್ವಲ್ ಕೆಲಸ ಮುಗಿಸಿ ತನ್ನ ಸಹೋದ್ಯೋಗಿಯೊಂದಿಗೆ ಮಂಗಳೂರು ಕಡೆ ಸಂಚರಿಸುತ್ತಿದ್ದ ವೇಳೆ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಬಸ್ ಮಂಗಳೂರು ಕಡೆ ಅತೀ ವೇಗವಾಗಿ ಅಜಾಗರೂಕತೆಯಿಂದ ಸಂಚರಿಸಿ ಸ್ಕೂಟರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದೆ. ಈ ವೇಳೆ ಬಸ್ಸಿನಡಿಗೆ ಸ್ಕೂಟರ್ ನೊಂದಿಗೆ ಸವಾರರು ಸಿಲುಕಿದ್ದು, ಸ್ಥಳೀಯರು ಘಟನಾ ಸ್ಥಳಕ್ಕೆ ಕ್ರೇನ್ ತರಿಸಿ ಬಸ್ಸನ್ನು ಮೇಲಕ್ಕೆತ್ತಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪ್ರಜ್ವಲ್ ಅರ್ನಾಲ್ಡ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬಸ್ಸಿನ ಎಮರ್ಜೆನ್ಸಿ ಬಾಗಿಲಿನ ಮೂಲಕ ಕಾಲೇಜಿನ ವಿದ್ಯಾರ್ಥಿಗಳನ್ನು ಹೊರತೆಗೆಯಲಾಗಿದ್ದು ತರಚು ಗಾಯಗಳೊಂದಿಗೆ ಅವರೆಲ್ಲರೂ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ ಬ್ರೇಕ್ ವೈಫಲ್ಯಕ್ಕೀಡಾಗಿ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದರೂ, ಪೊಲೀಸರು ತನಿಖೆ ಆರಂಭಿಸಿದ್ದಾರೆ.

0 Comments