ಸಾಂದರ್ಭಿಕ ಚಿತ್ರ
ಮುಳ್ಳೇರಿಯ : ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಐವರನ್ನು ಆದೂರು ಪೊಲೀಸರು ಬಂಧಿಸಿ, ಅವರಿಂದ ₹6,300 ನಗದು ಹಾಗೂ ಒಂದು ಕೋಳಿಯನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪೇರಡ್ಕ ಶಾಂತಿಕೋಡು ನಿವಾಸಿ ಪ್ರವೀಣ್ (30), ಕೋಮರಡ್ಕ ಅರಿಯಡ್ಕದ ಬಿ. ಮುರಳಿ (29), ಕುಂಜಪುಡಿಯ ರಂಜಿತ್ (25), ಸವಣೂರು ಬಂಬಿಲ ಪತ್ತೊಡಿಯ ರಾಧಾಕೃಷ್ಣನ್ (26) ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಆದೂರು ಪೊಲೀಸ್ ಠಾಣೆಯ ಎಎಸ್ಐ ಸತ್ಯಪ್ರಕಾಶ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಬೆಳ್ಳೂರು ಬಜ ಕಾಲೇಜು ಸಮೀಪದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಕೋಳಿ ಅಂಕದಲ್ಲಿ ತೊಡಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು.
ಘಟನಾ ಸ್ಥಳದಲ್ಲಿ ಸುಮಾರು 10 ಮಂದಿ ಇದ್ದು, ಪೊಲೀಸ್ ತಂಡವನ್ನು ಕಂಡ ತಕ್ಷಣ ಐವರು ಕೋಳಿಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಐವರನ್ನು ಸ್ಥಳದಲ್ಲೇ ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಆದೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

0 Comments