ಬಳ್ಳಾರಿ : ವಾರದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತನನ್ನು ಕೊಲೆಗೈದಿರುವ ಘಟನೆ ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ನಡೆದಿದೆ.
ನಬಿ ರಸೂಲ್ ಭೀಕರವಾಗಿ ಹತ್ಯೆಯಾದ ಯುವಕ. ರಸೂಲ್ ವಿಚ್ಛೇದನ ಪಡೆದಿದ್ದ ಮಹಿಳೆಯನ್ನು 15 ದಿನಗಳ ಹಿಂದೆ ಪ್ರೀತಿಸಿ ಮನೆ ಬಿಟ್ಟು ಕರೆದುಕೊಂಡು ಹೋಗಿದ್ದ. ಬಳಿಕ ಇಬ್ಬರೂ ಮನೆಗೆ ಮರಳಿದ್ದರು. ಮದುವೆಗೆ ಯುವತಿ ಪೋಷಕರ ವಿರೋಧ ಇತ್ತು ಎನ್ನಲಾಗಿದೆ. ಯುವಕನ ಮನೆಯವರು ಒಪ್ಪಿ ನಬಿ ರಸೂಲ್ಗೆ ಮದುವೆ ಮಾಡಿಸಿ ಗುರುವಾರ ರಿಸೆಪ್ಷನ್ ಇಟ್ಟುಕೊಳ್ಳಲಾಗಿತ್ತು. ಸಂಭ್ರಮದಿಂದ ಮದುವೆ ಮತ್ತು ರಿಸೆಪ್ಷನ್ ಕಾರ್ಯಕ್ರಮ ನಡೆದಿತ್ತು. ರಾತ್ರಿ 11:30ರ ಸುಮಾರಿಗೆ ಸ್ನೇಹಿತ ಕರೆದ ಅಂತಾ ರಸೂಲ್ ಮನೆಯಿಂದ ಹೊರ ಹೋಗಿದ್ದಾನೆ.
ರಾತ್ರಿ ಎರಡು ಗಂಟೆಯಾದರೂ ನಬಿ ರಸೂಲ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಪೋಷಕರು ಮತ್ತು ಸಂಬಂಧಿಕರು ಮನೆ ಸುತ್ತ ಹುಡುಕಾಡಿದ್ದಾರೆ. ಈ ವೇಳೆ ಮನೆಯಿಂದ ಸುಮಾರು 700 ಮೀಟರ್ ದೂರದಲ್ಲಿ ನಬಿ ರಸೂಲ್ ಹೆಣವಾಗಿ ಸಿಕ್ಕಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದೇ ಯುವಕನ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಸುಮನ್ ಡಿ ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments