ಕೋಝಿಕ್ಕೋಡ್ : ಕೇರಳದಲ್ಲಿ ಮತ್ತೊಮ್ಮೆ ಮಾನವೀಯತೆಯ ಸಂಕೇತವಾಗಿ ಅಂಗಾಂಗ ದಾನ ನಡೆದಿದೆ. ಕೋಝಿಕ್ಕೋಡ್ ಜಿಲ್ಲೆಯ ಇರಿಂಗಲ್ಕೊಟ್ಟಕ್ಕಲ್ನ 20 ವರ್ಷದ ವಿಷ್ಣು ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ನೀಡಿದ್ದಾರೆ.
ತೀವ್ರ ತಲೆನೋವಿನ ಹಿನ್ನೆಲೆಯಲ್ಲಿ ಜುಲೈ 6ರಂದು ವಿಷ್ಣುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಕೋಝಿಕ್ಕೋಡ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ವೈದ್ಯರು ಅವರಿಗೆ ಬ್ರೈನ್ ಡೆತ್ ಸಂಭವಿಸಿದೆ ಎಂದು ಘೋಷಿಸಿದರು.
ಕುಟುಂಬದವರು ದುಃಖದ ನಡುವೆಯೂ ವಿಷ್ಣುವಿನ ಯಕೃತ್ತು, ಕಾರ್ನಿಯಾ ಹಾಗೂ ಮೂತ್ರಪಿಂಡಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಅವರ ಒಂದು ಮೂತ್ರಪಿಂಡವನ್ನು ರಸ್ತೆ ಮಾರ್ಗದ ಮೂಲಕ ಕೋಝಿಕ್ಕೋಡ್ ಮಿಮ್ಸ್ (MIMS) ಆಸ್ಪತ್ರೆಯಿಂದ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಗುತ್ತಿದೆ.
ಅಂಗಾಂಗವನ್ನು ತ್ವರಿತವಾಗಿ ತಲುಪಿಸಲು 'ಗ್ರೀನ್ ಕಾರಿಡಾರ್' ವ್ಯವಸ್ಥೆ ಮಾಡಲಾಗಿದ್ದು, KL-05-BB-5596 ಸಂಖ್ಯೆಯ ಆಂಬುಲೆನ್ಸ್ನಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೋಝಿಕ್ಕೋಡ್ ನಿಂದ ಪ್ರಯಾಣ ಆರಂಭಿಸಲಾಗಿದೆ. ಸಂಚಾರ ಸುಗಮವಾಗುವಂತೆ ವಾಹನಗಳಿಗೆ ದಾರಿ ಬಿಡುವಂತೆ ಕೆ-ಸೊಟ್ಟೊ (K-SOTTO) ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದ ವಿಷ್ಣುವಿನ ಅಂಗಾಂಗ ದಾನ ನಿರ್ಧಾರ ಅನೇಕ ಜೀವಗಳಿಗೆ ಹೊಸ ಆಶಾಕಿರಣವಾಗಿದ್ದು, ಅವರ ಕುಟುಂಬದ ಮಾನವೀಯ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
.png)
0 Comments