ಬೆಳ್ತಂಗಡಿ : ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೇಕ ದೊಡ್ಡ ದೊಡ್ಡ ಹೊಂಡಗಳಾಗಿರುವುದರಿಂದ ವಾಹನ ಸಂಚಾರಕ್ಕೆ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಇದರ ಪರಿಣಾಮ ಮಂಗಳೂರಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯೊಬ್ಬರು ಬೈಕ್ ಸ್ಕಿಡ್ ಆಗಿ ಸ್ಥಳದಲ್ಲೇ ರಸ್ತೆ ಮಧ್ಯೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಲಾಯಿಲ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಮೃತ ವಿದ್ಯಾರ್ಥಿಯು ಮಂಗಳೂರು ನೀರುಮಾರ್ಗ ನಿವಾಸಿ ಧೀರಜ್ (23) ಎಂದು ಗುರುತಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಕೇರಳದ ತಿರುವನಂತಪುರ ನಿವಾಸಿ ಕೇಶವ ಎಂಬುವವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳೂರು ಕಾಲೇಜೊಂದರ ನಾಲ್ವರು ವಿದ್ಯಾರ್ಥಿಗಳು ಬಾಡಿಗೆ ಸ್ಕೂಟರ್ ಗಳಲ್ಲಿ ಕೊಟ್ಟಿಗೆಹಾರ ಸಮೀಪದ ದೇವರಮನೆಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಸಂಜೆ ಮಂಗಳೂರಿಗೆ ಹಿಂತಿರುಗುತ್ತಿದ್ದಾಗ ಲಾಯಿಲ ಜಂಕ್ಷನ್ ಬಳಿ ಈ ದುರಂತ ಸಂಭವಿಸಿದೆ. ಮಳೆಗಾಲವಾದದ್ದರಿಂದ ಕತ್ತಲಲ್ಲಿ ರಸ್ತೆಯಲ್ಲಿದ್ದ ಗುಂಡಿ ಕಾಣಿಸದೆ ಅಥವಾ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ ಎನ್ನಲಾಗಿದೆ.
ಬೈಕ್ ಸ್ಕಿಡ್ ಆಗಿ ಪಲ್ಟಿಯಾದ ರಭಸಕ್ಕೆ ಹಿಂಬದಿ ಸವಾರ ಧೀರಜ್ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಇದೇ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಅಪರಿಚಿತ ವಾಹನವೊಂದು ಧೀರಜ್ ಅವರ ತಲೆಯ ಮೇಲಿನಿಂದ ಹಾದು ಹೋಗಿರುವ ಸಾಧ್ಯತೆಯಿದೆ. ತೀವ್ರ ರಕ್ತಸ್ರಾವವಾಗಿರುವುದರಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಈ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರು ತುಂಬಾ ಕಷ್ಟ ಅನುಭವಿಸುತ್ತಾರೆ. ಹೆದ್ದಾರಿಯಲ್ಲಿ ಆಗುವ ಗುಂಡಿಗಳು ವಾಹನ ಸವಾರರಿಗೆ ನರಕದಂತೆ ಭಾಸವಾಗುತ್ತವೆ. ಹೆದ್ದಾರಿ ಕಾಮಗಾರಿಯನ್ನು ಅತ್ಯಂತ ಅವೈಜ್ಞಾನಿಕವಾಗಿ ಮಾಡಲಾಗುತ್ತಿರುವುದರಿಂದ ಇದು ಸರಣಿ ಅಪಘಾತಗಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಕಾಮಗಾರಿ ನಡೆಯುವ ಅಥವಾ ಅಪಾಯಕಾರಿ ವಲಯಗಳಲ್ಲಿ ಯಾವುದೇ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಮಳೆಯ ನೀರಿನಿಂದಾಗಿ ರಸ್ತೆ ಯಾವುದು , ಗುಂಡಿ ಯಾವುದು ಎಂದು ಗೊತ್ತಾಗದ ಪರಿಸ್ಥಿತಿ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಯುವಕನ ಸಾವಿಗೆ ನೇರ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಗುಂಡಿ ಮುಚ್ಚುವ ಕೆಲಸ ಮಾಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

0 Comments