ಕಾಸರಗೋಡು : ಕೋಟೆಕಣಿ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ನ ನೇತೃತ್ವದಲ್ಲಿ ಓಣಂ ಆಚರಣೆ ಹಾಗೂ ಗಣೇಶ ಚತುರ್ಥಿಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಯೋಜಿಸಲಾಯಿತು.
ಕೋಟೆಕಣಿಯ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಬೆಳಿಗ್ಗೆ ಮಕ್ಕಳಿಗಾಗಿ ವಿವಿಧ ಆಟೋಟ ಹಾಗೂ ಮನರಂಜನಾ ಸ್ಪರ್ಧೆಗಳು ನಡೆದವು. ಸಿಹಿ ಸಂಗ್ರಹ, ಬಾಲ್ ಟು ವಿಕೆಟ್, ಕಲರಿಂಗ್, ಪೊಟೇಟೋ ರೇಸಿಂಗ್, ಮೆಮೊರಿ ಟೆಸ್ಟ್ , ಪೆನ್ಸಿಲ್ ಡ್ರಾಯಿಂಗ್ , ಬಿಸ್ಕೆಟ್ ತಿನ್ನುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಮಕ್ಕಳ ವಯೋಮಾನದ ಆಧಾರದ ಮೇಲೆ ಆಯೋಜಿಸಲಾಗಿತ್ತು.
ಮಧ್ಯಾಹ್ನ ಕೋಟೆಕಣಿ ಮೈದಾನದಲ್ಲಿ ವಿಕೆಟ್ ಸುತ್ತುವುದು, ಮ್ಯೂಸಿಕಲ್ ಕಾರ್ನರ್, ಬಿಸ್ಕೆಟ್ ತಿನ್ನುವುದು, ಬಲೂನ್ ಬ್ಲಾಸ್ಟಿಂಗ್, ಲಿಂಬೆ-ಚಮಚ, ಲೆಗ್ ವಿತ್ ಸಾಫ್ಟ್ ಡ್ರಿಂಕ್ಸ್, ಹಗ್ಗಜಗ್ಗಾಟ, ಬಲೂನ್ ಇನ್ ಗ್ಲಾಸ್ ಸೇರಿದಂತೆ ಹಲವು ಮನರಂಜನಾ ಸ್ಪರ್ಧೆಗಳು ನಡೆದವು. ಮಕ್ಕಳು, ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕೆ. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್ ರವೀಂದ್ರನ್ ವೈ. ಹಾಗೂ ಬಸ್ ಮಾಲೀಕ ಅಶೋಕ ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೌನ್ಸಿಲರ್ಗಳಾದ ಶ್ರುತಿ ಕೆ.ಎಸ್. ಹಾಗೂ ದಿವ್ಯ ಸಂದೀಪ್, ಕೋಟೆಕಣಿ ಫ್ರೆಂಡ್ಸ್ ಕ್ಲಬ್ನ ಹಿರಿಯ ಸದಸ್ಯ ಉದಯಕುಮಾರ್ ಕೆ. ಹಾಗೂ ಕಾರ್ಯದರ್ಶಿ ಜಿತಿನ್ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯ ವಿಜೇತರನ್ನು ಸನ್ಮಾನಿಸಲಾಯಿತು.
ಕಾರ್ಯಕಾರಿ ಸದಸ್ಯ ಸಂಜಯ್ ಕುಮಾರ್ ಕೆ. ಕಾರ್ಯಕ್ರಮ ನಿರೂಪಿಸಿದರು. ಕೋಟೆಕಣಿ ಫ್ರೆಂಡ್ಸ್ ಕ್ಲಬ್ನ ಜೊತೆ ಕಾರ್ಯದರ್ಶಿ ಶ್ರೇಯಸ್ ರಂಜನ್ ಕೆ. ಸ್ವಾಗತಿಸಿದರು. ಕೋಶಾಧಿಕಾರಿ ನಿಜೇಶ್ ಜಿ. ವಂದಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸ್ಥಳೀಯರ ಸಹಕಾರ ಹಾಗೂ ಕ್ಲಬ್ ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.


0 Comments