ಕಾಸರಗೋಡು : ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಆರನೇ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಡಾ. ಕೀಲಾರು ಗೋಪಾಲ ಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಪ್ರಾಯೋಜಿತ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಅಷ್ಟಾಹದ ಸಮಾರೋಪ ಸಮಾರಂಭವನ್ನು ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ರಾಘವೇಂದ್ರ ಭಟ್ ಉದ್ಘಾಟಿಸಿದರು. ಸಮಾಜದಲ್ಲಿ ಆಸ್ತಿಕತೆ ಮತ್ತು ಧಾರ್ಮಿಕ ಪ್ರಜ್ಞೆಯನ್ನು ಜಾಗೃತಿ ಗೊಳಿಸುವುದರೊಂದಿಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ನಿರಂತರ ಪ್ರೋತ್ಸಾಹವನ್ನು ಎಡನೀರು ಮಠ ನೀಡುತ್ತಾ ಬಂದಿದೆ. ಯಕ್ಷಗಾನ ಕಲೆಯ ಬೆಳವಣಿಗೆಗೆ ಶ್ರೀ ಮಠವು ಅಮೂಲ್ಯವಾದ ಕೊಡುಗೆಯನ್ನು ನೀಡಿದೆ ಎಂದರು.
ಕೇಂದ್ರ ಸಂಗೀತ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಮಠದ ವತಿಯಿಂದ ಅಭಿನಂದಿಸಲಾಯಿತು. ಶ್ರೀಗಳು ಆಶೀರ್ವಾದ ಮಂತ್ರಾಕ್ಷತೆ ನೀಡಿ ಹರಸಿದರು. ಚಾತುರ್ಮಾಸ್ಯ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ.ಟಿ.ಶ್ಯಾಮಭಟ್ ಮಾತನಾಡಿದರು. ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಅಭಿನಂದನಾ ನುಡಿಗಳನ್ನಾಡಿದರು. ಕೆರೆಮನೆ ಶಿವಾನಂದ ಹೆಗಡೆ ಅವರು ಮಾತನಾಡಿ, ಮಠಗಳು ಕೇವಲ ಧಾರ್ಮಿಕಮಾರ್ಗದರ್ಶನವಲ್ಲದೆ, ದೇಶದ ನಿಜವಾದ ಸಂಸ್ಕೃತಿ, ಪರಂಪರೆ, ಕಲೆ, ಇತಿಹಾಸ, ಸಾಹಿತ್ಯವನ್ನು ಶ್ರೀಮಂತಗೊಳಿಸುವತ್ತ ಚಿಂತಿಸುತ್ತಿವೆ ಎಂದರು. ಆರ್ಥಿಕ ಮತ್ತು ಸಾಮಾಜಿಕವಲ್ಲದೆ ಬದುಕಿಗೆ ಪ್ರೇರೇಪಿಸುವಂತ ಶಕ್ತಿಯನ್ನು ನೀಡುವ ಯಕ್ಷಗಾನ ಕಲೆಗೆ ಇಲ್ಲಿ ಆಶ್ರಯ ಲಭಿಸಿದೆ ಎಂದರು.
ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನವನ್ನು ನೀಡಿ ಹನುಮಗಿರಿ ಮೇಳವು ಯಕ್ಷಗಾನ ಕಲೆಯ ಗುಣಮಟ್ಟವನ್ನು ಕಾಯ್ದುಕೊಂಡು ಬಂದು ಜನರ ಪ್ರೀತಿಗೆ, ಪ್ರೋತ್ಸಾಹಕ್ಕೆ ಕಾರಣವಾಗಿದೆ ಎಂದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು, ವೃಕ್ಷಕ್ರಾಂತಿಯ ಸರದಾರ ಆರ್.ಕೆ. ನಾಯರ್ ಗುಜರಾತ್, ಮಂಟಪ ಪ್ರಭಾಕರ ಉಪಾಧ್ಯಾಯ, ಬಾಯಾರು ಗಣೇಶ್ ಭಟ್, ನಾಗರಾಜ ಭಟ್, ಸತೀಶ್ ರಾವ್ ಎಡನೀರು, ಎಂ. ಎಲ್.ಭಟ್ ಸಾಗರ, ಅರುಣಾ ರಾಘವೇಂದ್ರ ಭಟ್ ಪಾಲ್ಗೊಂಡಿದ್ದರು. ಶ್ರೀ ಮಠದ ಆಡಳಿತ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಹರೀಶ ಬಳಂತಿಮೊಗರು ನಿರೂಪಿಸಿದರು.
ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments