ಪೆರ್ಲ : ಎಸ್.ಎಂ. ಕಲಾ ಹಾಗೂ ಕ್ರೀಡಾ ಸಂಘ (ರಿ.), ಬೆದ್ರಂಪಳ್ಳ ಇವರ ಆಶ್ರಯದಲ್ಲಿ 24ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಬೆದ್ರಂಪಳ್ಳ ಶಾಲಾ ವಠಾರದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗಿನಿಂದಲೇ ವಿವಿಧ ಸ್ಪರ್ಧೆಗಳು ನಡೆದವು. ಕಿರಿಯರು ಹಾಗೂ ಹಿರಿಯರ ವಿಭಾಗದಲ್ಲಿ ಭಕ್ತಿಗಾನ, ಹಗ್ಗಜಗ್ಗಾಟ, 10 ವರ್ಷದೊಳಗಿನ ಮಕ್ಕಳಿಗೆ ಬಟಾಟೆ ಹೆಕ್ಕುವ ಸ್ಪರ್ಧೆ ಹಾಗೂ ಅಂಗನವಾಡಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು.
ಮಹಿಳೆಯರಿಗಾಗಿ ಸಂಗೀತ ಕುರ್ಚಿ, ಹಣತೆ ಉರಿಸುವುದು, ಹಗ್ಗಜಗ್ಗಾಟ, ಸೂಜಿನೂಲು ಓಟ ಹಾಗೂ ಲಿಂಬೆ-ಚಮಚ ಸ್ಪರ್ಧೆಗಳು ನಡೆದವು. ಮಕ್ಕಳಿಗಾಗಿ ಬಾಟಲಿಗೆ ನೀರು ತುಂಬಿಸುವ ಸ್ಪರ್ಧೆ, ಪುರುಷರಿಗಾಗಿ ಮೈದಾನಾಣ್ಯ, ಮೂರುಕಾಲಿನ ಓಟ ಹಾಗೂ ಮಡಕೆ ಒಡೆಯುವ ಸ್ಪರ್ಧೆಗಳು ಗಮನ ಸೆಳೆದವು. ಇಬ್ಬರ ತಂಡಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಅಧ್ಯಕ್ಷ ಚಂದ್ರ ಎಂ. ಅಧ್ಯಕ್ಷತೆವಹಿಸಿದ್ದರು. ಎಣ್ಮಕಜೆ ಗ್ರಾ.ಪಂ.ಸದಸ್ಯೆ ಸೌದಭಿ ಹನೀಫ್, ಸಾಮಾಜಿಕ ಮುಂದಾಳು ರಾಮಕೃಷ್ಣ ರೈ ಕುದ್ವ, ಬೆದ್ರಂಪಳ್ಳ ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಕುಮಾರ್, ಅಂಗನವಾಡಿ ಅಧ್ಯಾಪಕಿ ಚೇತನಾ, ದೇಶಾಭಿಮಾನಿ ಲೈಬ್ರರಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮಾಸ್ತರ್, ಪತ್ರಕರ್ತ ಜಯ ಮಣಿಯಂಪಾರೆ ಮೊದಲಾದವರು ಭಾಗವಹಿಸಿದ್ದರು.
ಈ ಸಂದರ್ಭ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಎಸ್ಸಸ್ಸೆಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಎ ಗ್ರೇಡ್ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಅವಿನಾಶ್ ಸಿ.ಎಚ್ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

0 Comments