'
ಬದಿಯಡ್ಕ : ಭೂಮಿಕಾ ಪ್ರತಿಷ್ಠಾನ ಉಡುಪಮೂಲೆ ಎಡನೀರು ಇದರ ಆಶ್ರಯದಲ್ಲಿ ಎಡನೀರು ಶ್ರೀಮಠದ ಆವರಣದಲ್ಲಿ ಏ.8 ರಿಂದ ಆಯೋಜಿಸಲಾಗಿದ್ದ 14ನೇ ವರ್ಷದ ಕನ್ನಡ ಸಂಸ್ಕೃತಿ ಶಿಬಿರ-2026 ಭಾನುವಾರ ಸಮಾರೋಪಗೊಂಡಿತು. ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು, ಆಶೀರ್ವಚನಗೈದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಾರ್ಗದರ್ಶನ ಸಕಾಲಕ್ಕೆ ಲಭ್ಯವಾದಾಗ ಧನಾತ್ಮಕ ಮತ್ತು ಕ್ರಿಯಾತ್ಮಕವಾದ ತಲೆಮಾರುಗಳ ಸೃಷ್ಟಿ ಸಾಧ್ಯ. ಮಕ್ಕಳ ಅಂತರಂಗವನ್ನು ಬೆಳಗಿಸುವ ಭೂಮಿಕಾ ಪ್ರತಿಷ್ಠಾನದ ನಿರಂತರ ಕಾರ್ಯತತ್ಪರತೆ ಸ್ತುತ್ಯರ್ಹವಾದುದು ಎಂದರು.
ಈ ಸಂದರ್ಭ ಪ್ರತಿಷ್ಠಾನದ ಸಂಯೋಜಕಿ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ಅವರ 'ಹೊಂಗಿರಣ' ಕಥಾ ಸಂಕಲನ ಹಾಗೂ ಶಿಲ್ಪಾ ಪರಮೇಶ್ವರಿ ಅವರ 'ಮೆಲು ಹೆಜ್ಜೆ' ಕವನ ಸಂಕಲನ ಕೃತಿಗಳನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಜೊತೆಗೆ ರ್ಯಾಂಕ್ ವಿಜೇತೆ ವೈದೇಹಿ ಕೆ. ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಹನಾ ಕೆ. ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ದೀಪಾ ಶಂಕರಿ ಸುಳ್ಯ ಸ್ವಾಗತಿಸಿ, ವಂದಿಸಿದರು.ವಿದುಷಿಃ ಅನುಪಮಾ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಘಾ ಭಟ್ ಸುಳ್ಯ ಪ್ರಾರ್ಥನಾ ಗೀತೆ ಹಾಡಿದರು. ಅನಿರುದ್ಧ ವಾಸಿಷ್ಠ ಶರ್ಮ ಉಡುಪಮೂಲೆ ನಿರೂಪಿಸಿದರು. ಇದಕ್ಕೂ ಮೊದಲು ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ತಂಡದವರಿಂದ 'ಲಂಕಾ ದಹನ' ಬೊಂಬೆಯಾಟ ಪ್ರದರ್ಶನ ನಡೆಯಿತು.
ಏ.8 ರಂದು ಭವಾನಿ ಶಂಕರ ಎಂ. ಅವರಿಂದ ಉದ್ಘಾಟನೆಗೊಂಡ ಸಂಸ್ಕೃತಿ ಶಿಬಿರದಲ್ಲಿ 'ನಿರ್ವಹಣಾ ಕೌಶಲ್ಯದೊಂದಿಗೆ ವ್ಯಕ್ತಿತ್ವ ವಿಕಾಸ'ದ ಬಗ್ಗೆ ನಿರ್ಮಲ್ ಕುಮಾರ್ ಕಾರಡ್ಕ, 'ಸುಂದರ ಹಸಿರು ನಮ್ಮಯ ಉಸಿರು' ವಿಷಯದ ಬಗ್ಗೆ ಚೇವಾರು ವಿನೋದ, 'ರಂಗೋಲ್ಲಾಸ' ವಿಷಯದಲ್ಲಿ ಸದಾಶಿವ ಬಾಲಮಿತ್ರ, 'ಹಾಡೋಣ, ನಲಿಯೋಣ, ಕಲಿಯೋಣ' ವಿಷಯದಲ್ಲಿ ಕಿಶೋರ್ ಪೆರ್ಲ, ಲತಾ ಪ್ರಕಾಶ್ ರಾವ್ ಬಹುಮನ ಬೆಳ್ಳೂರಡ್ಕ ವಿವಿಧ ದಿನಗಳಲ್ಲಿ ತರಬೇತಿ ನೀಡಿದ್ದರು.


0 Comments