ಚೆನ್ನೈ : ದೇವಾಲಯಕ್ಕೆ ಭೇಟಿ ನೀಡಿದ್ದ ನವವಿವಾಹಿತ ಮಹಿಳೆಯೊಬ್ಬರು ಕೋತಿಗಳ ಗುಂಪಿಗೆ ಹೆದರಿ ಬೆಟ್ಟದ ಮೇಲಿನಿಂದ ಕಾಲುಜಾರಿ ಬಿದ್ದು ಮೃತಪಟ್ಟ ದುರ್ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ. ತೂತುಕುಡಿ ಜಿಲ್ಲೆಯ ದಕ್ಷಿಣ ತಿಟ್ಟಂಕುಳಂ ನಿವಾಸಿ ಅನಿತಾ ಮೃತ ದುರ್ದೈವಿ. ಕಳೆದ ತಿಂಗಳಷ್ಟೇ ಸುರೇಶ್ ಅವರೊಂದಿಗೆ ವಿವಾಹವಾಗಿದ್ದ ಅವರು, ಪತಿಯೊಂದಿಗೆ ಕಜುಗುಮಲೈನಲ್ಲಿರುವ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು.
ಮುಖ್ಯ ದೇವಾಲಯದಲ್ಲಿ ಪೂಜೆ ಮುಗಿಸಿದ ಬಳಿಕ, ಬೆಟ್ಟದ ತುದಿಯಲ್ಲಿರುವ ಉಚಿಪಿಳ್ಳಯಾರ್ ದೇವಾಲಯಕ್ಕೆ ದಂಪತಿ ತೆರಳಿದ್ದರು. ಈ ವೇಳೆ ಅಲ್ಲಿದ್ದ ಕೋತಿಗಳಿಗೆ ಹಣ್ಣು ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಹಣ್ಣು ಕಂಡು ಏಕಾಏಕಿ ಹಲವು ಕೋತಿಗಳು ದಂಪತಿಯನ್ನು ಸುತ್ತುವರಿದಾಗ ಆತಂಕಗೊಂಡ ಅನಿತಾ ಹಿಂದಕ್ಕೆ ಸರಿಯುವ ವೇಳೆ ಕಾಲು ಜಾರಿ ಬೆಟ್ಟದ ಮೇಲಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕಜುಗುಮಲೈ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

0 Comments