ಬದಿಯಡ್ಕ: ಮಾದಕ ದ್ರವ್ಯ ಅಥವಾ ಡ್ರಗ್ಸ್ ಎಂಬುದು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ನಾಶಮಾಡುವುದಿಲ್ಲ, ಅದು ಇಡೀ ಕುಟುಂಬವನ್ನು ಬೀದಿಗೆ ತರುತ್ತದೆ ಮತ್ತು ಸಮಾಜದ ಶಾಂತಿಯನ್ನು ಕೆಡಿಸುತ್ತದೆ. ಇಂದು ನಮ್ಮ ದೇಶದ ಅತಿ ದೊಡ್ಡ ಆಸ್ತಿ ಎಂದರೆ ನಮ್ಮ ಯುವಶಕ್ತಿ. ಆದರೆ, ಈ ಯುವಶಕ್ತಿಯನ್ನು ದಾರಿ ತಪ್ಪಿಸಲು ಕೆಲವು ದುಷ್ಟ ಶಕ್ತಿಗಳು ಮಾದಕ ವಸ್ತುವಿನ ಜಾಲವನ್ನು ಹರಡುತ್ತಿವೆ. ಇದಕ್ಕೆ ನಮ್ಮ ಬದಿಯಡ್ಕದ ಯಾವುದೇ ಕುಟುಂಬ ಬಲಿಯಾಗಲು ನಾವು ಬಿಡುವುದಿಲ್ಲ ಎಂದು ಇಂದು ನಾವು ಇಲ್ಲಿ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಹೇಳಿದರು.
ಬದಿಯಡ್ಕ ಗ್ರಾಮಪಂಚಾಯಿತಿ, ಕೇರಳ ಪೊಲೀಸ್ ಬದಿಯಡ್ಕ ಪೊಲೀಸ್ ಠಾಣೆ, ಎಸ್.ಪಿ.ಸಿ. ಮತ್ತು ಎನ್.ಸಿ.ಸಿ. ಘಟಕ ನವಜೀವನ ಶಾಲೆ ಪೆರಡಾಲ, ಪೆರಡಾಲ ಸರಕಾರಿ ಶಾಲೆ, ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ವ್ಯಾಪಾರಿ ಸದಸ್ಯರು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ಬದಿಯಡ್ಕದಲ್ಲಿ ಜರಗಿದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ನಮ್ಮ ಬದಿಯಡ್ಕ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಈ "ಮಾದಕ ದ್ರವ್ಯ ವಿರೋಧಿ ಜಾಗೃತಿ ರ್ಯಾಲಿ" ಕೇವಲ ಒಂದು ಕಾರ್ಯಕ್ರಮವಲ್ಲ; ಇದು ನಮ್ಮ ಭವಿಷ್ಯವನ್ನು, ನಮ್ಮ ಮಕ್ಕಳನ್ನು ಮತ್ತು ನಮ್ಮ ಸಮಾಜವನ್ನು ಉಳಿಸಿಕೊಳ್ಳಲು ನಾವು ಒಟ್ಟಾಗಿ ಹೂಡಿರುವ ಒಂದು ಯುದ್ಧ ಎಂದರು. ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ ಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಮಾದಕ ದ್ರವ್ಯಗಳ ಜಾಲವು ಹದಿಹರೆಯದವರನ್ನು ಸುಲಭವಾಗಿ ಆಕರ್ಷಿಸುತ್ತದೆ. ಕೇವಲ ಒಂದು ಬಾರಿಯ ಮೋಜು ಇಡೀ ಜೀವನದ ಕತ್ತಲೆಗೆ ಕಾರಣವಾಗಬಹುದು. ನಿಮ್ಮ ಮಕ್ಕಳ ನಡವಳಿಕೆಯಲ್ಲಿ ಹಠಾತ್ ಬದಲಾವಣೆಗಳು ಕಂಡುಬಂದರೆ, ಅವರ ಸ್ನೇಹಿತರ ಬಳಗ ಯಾರೆಂದು ಗಮನಿಸಿ. ಅವರಿಗೆ ಪ್ರೀತಿ ಮತ್ತು ಧೈರ್ಯವನ್ನು ನೀಡಬೇಕು. ನಿಮ್ಮ ಆಸುಪಾಸಿನಲ್ಲಿ ಎಲ್ಲಿಯಾದರೂ ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆ ನಡೆಯುತ್ತಿರುವುದು ಕಂಡುಬಂದರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು. ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್., ಕಾರ್ಯದರ್ಶಿ ರವಿ ನವಶಕ್ತಿ, ಪಂಚಾಯಿತಿ ಆರೋಗ್ಯ ಅಧಿಕಾರಿ ಬಾಬುರಾಜ್ ಎ. ಮೊದಲಾದವರು ಮಾತನಾಡಿದರು. ಗ್ರಾಮಪಂಚಾಯಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಗಂಗಾಧರ ಗೋಳಿಯಡ್ಕ, ಶ್ಯಾಮಪ್ರಸಾದ ಮಾನ್ಯ, ಮಧುಸೂಧನ ಕಂಗಿಲ, ಶ್ಯಾಮಪ್ರಸಾದ ಸರಳಿ, ಅನ್ನತ್ ಬೀವಿ, ಉಷಾ ಪಳ್ಳತ್ತಡ್ಕ, ವಿವಿಧ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮಾದಕ ದ್ರವ್ಯದ ಉಪಯೋಗದ ವಿರುದ್ಧ ಪ್ರತಿಜ್ಞೆ ಕೈಗೊಳ್ಳಲಾಯಿತು. ಬದಿಯಡ್ಕ ಪೊಲೀಸ್ ಠಾಣಾಧಿಕಾರಿಗಳಾದ ಸುಕುಮಾರನ್ ಸ್ವಾಗತಿಸಿ, ರೂಪೇಶ್ ವಂದಿಸಿದರು. ಬದಿಯಡ್ಕ ಪೇಟೆಯಲ್ಲಿ ಜಾಗೃತಿ ಸಂದೇಶ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು.

0 Comments