ಬಂದಡ್ಕ: ಪ್ಲಾಟಿನಂ ಜುಬಿಲಿ ಆಚರಣೆಯ ಸಂಭ್ರಮದಲ್ಲಿರುವ ಜಿ.ಎಚ್.ಎಸ್.ಎಸ್ ಬಂದಡ್ಕದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷರಾದ ಪಿ.ವಿ ಸುರೇಶ್ ವಹಿಸಿದ್ದರು. ವಲಯ ಅರಣ್ಯಾಧಿಕಾರಿ ವಿನೋದ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವರ್ಷ ಒಂದನೇ ತರಗತಿಗೆ ಪ್ರವೇಶ ಪಡೆದ ಮೊದಲ ಮಗು ಆರ್ಯವರ್ಧನ್ ಎಮ್ ಮತ್ತು ಉದ್ಘಾಟಕರು ಜಂಟಿಯಾಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಎಸ್.ಎಫ್.ಒ ಬಾಬು, ಮಾಜಿ ಪಿ.ಟಿ.ಎ ಅಧ್ಯಕ್ಷ ರಾಧಾಕೃಷ್ಣನ್ ಕೆ, ಪ್ಲಾಟಿನಂ ಜುಬಿಲಿ ಕಾರ್ಯಕ್ರಮದ ಸಂಚಾಲಕಿ ವಸಂತಕುಮಾರಿ ಟಿ.ಕೆ, ಎಸ್.ಪಿ.ಸಿ ಸಿ.ಪಿ.ಒ ಸಂದೀಪ್ ಬಿ.ಎಸ್, ಎನ್.ಎಸ್.ಎಸ್ ಸಂಯೋಜಕಿ ಸಂಧ್ಯಾ ಎಮ್.ಪಿ, ಬಾಬು ಮತ್ತು ರಂಜಿತ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಂತರ ವಿನೋದ್ ಕುಮಾರ್ ಅವರು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪರಿಸರ ದಿನಾಚರಣೆಯ ಪೋಸ್ಟರ್ ಪ್ರದರ್ಶನ, ರಸಪ್ರಶ್ನೆ, ಚಿಟ್ಟೆ ಉದ್ಯಾನವನದ ನವೀಕರಣ ಮತ್ತು ಗಿಡಗಳ ವಿತರಣೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು. ಶಾಲಾ ಮುಖ್ಯೋಪಾಧ್ಯಾ ರಾಘವ ಎಮ್.ಎನ್ ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ಜ್ಯೋತಿಲಕ್ಷ್ಮಿ ವಂದಿಸಿದರು.

0 Comments