ಲಕ್ನೋ : ವಾಯುವ್ಯ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ತರಬೇತಿ ಕೇಂದ್ರವಿದ್ದ ಕಟ್ಟಡದಲ್ಲಿ ಸೋಮವಾರ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ ಸುಮಾರು 15 ಜನರು ಸಾವನ್ನಪ್ಪಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ದುರಂತ ಸಂಭವಿಸಿದ್ದು, ಕಟ್ಟಡದಲ್ಲಿ ಹಲವರು ಸಿಲುಕಿಕೊಂಡಿದ್ದರು. ಕೆಲವು ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಮೊದಲ ಮಹಡಿಯಿಂದ ಜಿಗಿದಿದ್ದರು. ಅಗ್ನಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ರಾಷ್ಟ್ರೀಯ ಪರಿಹಾರ ನಿಧಿ(PMNRF)ಯಿಂದ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ದುರಂತದಲ್ಲಿ 15 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಗರ್, ಅನಾಮಿಕ, ನಿಲೇಶ್, ಸಂಯಮ್, ಅನುಚಾ, ಸುಖ್ ಮಣಿ, ಆದಿತ್ಯ ಶ್ರೀವಾಸ್ತವ, ಜ್ಯೋತಿ, ಭವಿಷ್ಯ, ಅಬ್ದುಲ್ ರಹ್ಮಾನ್, ಸೂರಜ್ ಶಾಹ್, ಶಹಜಾನ್, ಜಾಯ್ನಿಲ್ ಚಕ್ರವರ್ತಿ, ಮೊಹಮ್ಮದ್ ಅಮ್ಮರ್, ಸುಮಲ್ಯಾ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.
ಲಕ್ನೋದ ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಅಲಿಗಢ ಪ್ರವಾಸವನ್ನು ರದ್ದುಗೊಳಿಸಿದರು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡದ ನಿಖರ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮೃತರಲ್ಲಿ ಓರ್ವನಾದ ಸುಖಮಣಿ ಸಿಂಗ್ ಎಂಬಾತ ಮಧ್ಯಾಹ್ನ 2:15ರ ಸುಮಾರಿಗೆ ತಂದೆಗೆ ಕರೆ ಮಾಡಿ, ಅಪ್ಪ ಕೋಚಿಂಗ್ ಸೆಂಟರ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ನನ್ನನ್ನು ಕಾಪಾಡು ಬಾ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಆದರೆ ತಂದೆ ಪ್ರಭ್ಜೋತ್ ಸಿಂಗ್ ಅವರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಮೃತ ಆದಿತ್ಯನ ತಾಯಿ ಮಾತಾಡಿ, ಸುಮಾರು ಎರಡೂವರೆ ಗಂಟೆಗಳ ಕಾಲ ಕಟ್ಟಡದಲ್ಲಿ ಆವರಿಸಿದ್ದ ದಟ್ಟ ಹೊಗೆಯೊಳಗೆ ನನ್ನ ಮಗ ಸಿಲುಕಿಕೊಂಡಿದ್ದ. ಅಲ್ಲಿ ನೆರೆದಿದ್ದ ಜನರು ವಿಡಿಯೋ ಮಾಡುವುದನ್ನು ಬಿಟ್ಟು, ಸ್ವಲ್ಪ ಮುಂಚಿತವಾಗಿ ಸಹಾಯ ಮಾಡಿದ್ದರೆ ನನ್ನ ಮಗ ಬದುಕುಳಿಯುತ್ತಿದ್ದ ಎಂದು ಕಣ್ಣೀರು ಹಾಕಿದ್ದಾರೆ. ಇನ್ನೂ ಮೃತ ಅಬ್ದುಲ್ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ತಂದೆಗೆ ಪಾರ್ಶ್ವವಾಯು ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಕೇವಲ 8-10 ತಿಂಗಳ ಹಿಂದೆಯಷ್ಟೇ ಅಬ್ದುಲ್ ಕೆಲಸಕ್ಕೆ ಸೇರಿದ್ದ. ಸದ್ಯ ವಯಸ್ಸಾದ ಪೋಷಕರು ಒಂಟಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಇಬ್ಬರು, ವಿದ್ಯುತ್ ಇಲಾಖೆಯ ಒಬ್ಬರು ಮತ್ತು ಅಗ್ನಿಶಾಮಕ ದಳದ ಒಬ್ಬರು ಸೇರಿದಂತೆ ನಾಲ್ಕು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇನ್ನೂ ಈ ಸಂಬಂಧ ಎಸ್ಐಟಿ ತನಿಖೆ ಆರಂಭಿಸಿದ್ದು, ಕಟ್ಟಡದ ಜಂಟಿ ಮಾಲೀಕರಾದ ರಾಮ್ ಕೃಷ್ಣ ಉಪಾಧ್ಯಾಯ, ವೀರೇಂದ್ರ ಪ್ರಸಾದ್ ಶುಕ್ಲಾ, ತುಷಾರ್ ಕೃಷ್ಣ ಜೈಸ್ವಾಲ್ ಮತ್ತು ಸುರೇಶ್ ಕುಮಾರ್ ಸಾಹು ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

0 Comments