ನವದೆಹಲಿ : ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಡೇ ಕೇರ್ ಕೇಂದ್ರದ ನಿರ್ಲಕ್ಷ್ಯದಿಂದ ಎರಡು ವರ್ಷದ ಮಗು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಕಿಗೆ ಬಂದಿದ್ದು, ಸಿಸಿಟಿವಿ ದೃಶ್ಯಗಳು ಪೋಷಕರ ಆಕ್ರೋಶಕ್ಕೆ ಕಾರಣವಾಗಿವೆ. ಜೂನ್ 22ರಂದು ಸಿಐಡಿಸಿಒ ಪ್ರದೇಶದಲ್ಲಿರುವ ಫಸ್ಟ್ಕ್ರೈ ಇಂಟೆಲ್ಲಿಟಾಟ್ಸ್ ಪ್ರೀ-ಸ್ಕೂಲ್ ಮತ್ತು ಡೇ ಕೇರ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 10:30ರ ಸುಮಾರಿಗೆ ವಕೀಲೆಯಾಗಿರುವ ತಾಯಿ ತಮ್ಮ 2 ವರ್ಷದ ಮಗುವನ್ನು ಡೇ ಕೇರ್ನಲ್ಲಿ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ಒಂದು ಮಗು ಹೊರಗೆ ಹೋಗಲು ಯತ್ನಿಸಿತು. ಆಗ ಆರೈಕೆ ಸಿಬ್ಬಂದಿ ಆ ಮಗುವನ್ನು ಕರೆದುಕೊಂಡು ಹೊರಗೆ ಹೋಗಿ, ಉಳಿದ ಮೂವರು ಮಕ್ಕಳನ್ನು ಕೋಣೆಯೊಳಗೆ ಲಾಕ್ ಮಾಡಿ ಬಾಗಿಲು ಮುಚ್ಚಿದ್ದಾರೆ.
ಕೊಠಡಿಯಲ್ಲಿ ಯಾವುದೇ ಶಿಕ್ಷಕಿ ಅಥವಾ ಆರೈಕೆ ಸಿಬ್ಬಂದಿ ಇಲ್ಲದ ಕಾರಣ ಮಕ್ಕಳು ಭಯಗೊಂಡು ಅಳತೊಡಗಿದ್ದಾರೆ. ಇದೇ ವೇಳೆ ಒಂದು ಮಗು ಮತ್ತೊಂದು ಮಗುವಿನ ಮೇಲೆ ಹಲ್ಲೆ ನಡೆಸಿ ಪದೇ ಪದೇ ಕಚ್ಚಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಸುಮಾರು 15 ನಿಮಿಷಗಳ ಅವಧಿಯಲ್ಲಿ 25 ಬಾರಿ ಕಚ್ಚಿರುವುದು ದಾಖಲಾಗಿದ್ದು, ಮಗು ನೋವಿನಿಂದ ಅಳುತ್ತಿದ್ದರೂ ಸಿಬ್ಬಂದಿ ತಕ್ಷಣ ಸ್ಪಂದಿಸಿಲ್ಲ ಎನ್ನಲಾಗಿದೆ.
ಘಟನೆಯಲ್ಲಿ ಮಗುವಿನ ಮುಖ, ಮೂಗು, ತುಟಿ, ಎದೆ, ಬೆನ್ನು ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನದವರೆಗೆ ಈ ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡದೆ, ಮಗು ಸಣ್ಣ ಮಟ್ಟಿನ ಗಾಯಗೊಂಡಿದೆ ಎಂದು ಮಾತ್ರ ಶಾಲಾ ಆಡಳಿತ ತಿಳಿಸಿತ್ತು. ಬಳಿಕ ಮಗುವಿನ ದೇಹದಲ್ಲಿ ಅನೇಕ ಗಾಯಗಳಿರುವುದು ಪೋಷಕರ ಗಮನಕ್ಕೆ ಬಂದಿದೆ.
ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಡೇ ಕೇರ್ನ ಸಿಇಒ, ಇಬ್ಬರು ವ್ಯವಸ್ಥಾಪಕರು, ಪ್ರಾಂಶುಪಾಲೆ ಹಾಗೂ ಆರೈಕೆ ಸಿಬ್ಬಂದಿ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸದಂತೆ ₹10 ಲಕ್ಷ ಪರಿಹಾರ ಹಾಗೂ ಮೂರು ವರ್ಷಗಳ ಉಚಿತ ಶಿಕ್ಷಣ ನೀಡುವ ಪ್ರಸ್ತಾಪ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಆಡಳಿತದವರು ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ತನಿಖೆಯನ್ನು ಪೊಲೀಸರು ಹಾಗೂ ಶಿಕ್ಷಣ ಇಲಾಖೆ ಕೈಗೊಂಡಿದ್ದು, ಡೇ ಕೇರ್ ಕೇಂದ್ರಕ್ಕೆ ಅಗತ್ಯ ಅನುಮತಿಗಳು ಇಲ್ಲದಿರುವ ಮಾಹಿತಿಯೂ ಬಹಿರಂಗವಾಗಿದೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

0 Comments