ಉಪ್ಪಳ : ರೋಗಬಾಧೆಯಿಂದಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದ ವ್ಯಕ್ತಿಯ ಮೃತದೇಹವನ್ನು ಇಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮುಸ್ಲಿಂ ಲೀಗ್ ಮತ್ತು ಮುಸ್ಲಿಂ ಲೀಗ್ನ ಜನಪ್ರತಿನಿಧಿಗಳು ನಡೆಸುತ್ತಿರುವ ಪ್ರಯತ್ನ ಅತ್ಯಂತ ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಆ ಕುಟುಂಬಕ್ಕೆ ಅಂತ್ಯಸಂಸ್ಕಾರದ ವೆಚ್ಚವನ್ನು ಭರಿಸಲು ಸಾಧ್ಯವಿರಲಿಲ್ಲ. ಹಾಗಾಗಿಯೇ ಕುಟುಂಬದ ಸದಸ್ಯರು ಅಂತ್ಯಸಂಸ್ಕಾರದ ಜವಾಬ್ದಾರಿಯನ್ನು ಜನಪ್ರತಿನಿಧಿಗಳಿಗೆ ಒಪ್ಪಿಸಿದ್ದರು. ಅವರ ಭೌತಿಕ ಶರೀರದ ಅಂತ್ಯಸಂಸ್ಕಾರದ ವೆಚ್ಚವನ್ನು ಭರಿಸಿ, ವಿಧಿವಿಧಾನಗಳ ನೇತೃತ್ವ ವಹಿಸಿದ್ದು ಸೇವಾ ಭಾರತಿ ಸಂಸ್ಥೆಯಾಗಿದೆ. ಸತ್ಯ ಹೀಗಿರುವಾಗ, ಅಂತ್ಯಸಂಸ್ಕಾರದ ಚಿತ್ರಗಳನ್ನು ತೆಗೆದುಕೊಂಡು ಇದರ ಸಂಪೂರ್ಣ ಜವಾಬ್ದಾರಿಯನ್ನು ನಾವೇ ವಹಿಸಿಕೊಂಡಿದ್ದೇವೆ ಎಂಬಂತೆ ಲೀಗ್ ನಾಯಕರು ಮತ್ತು ಜನಪ್ರತಿನಿಧಿಗಳು ನೀಡಿರುವ ಹೇಳಿಕೆಗಳು ಹಾಗೂ ಪ್ರಕಟಣೆಗಳು ಸತ್ಯಕ್ಕೆ ದೂರವಾಗಿವೆ.
ಅನಾಥವಾದ ಅಥವಾ ಉಪೇಕ್ಷಿಸಲ್ಪಟ್ಟ ಮೃತದೇಹಗಳ ಅಂತ್ಯಸಂಸ್ಕಾರ ಮಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ತಪ್ಪು ಮಾಹಿತಿಯನ್ನು ಹರಡಿ ಹಿಂದೂ ಸಮಾಜವನ್ನು ಒಡೆಯಲು ಮತ್ತು ಬಡ ಕುಟುಂಬದ ದಯನೀಯ ಸ್ಥಿತಿಯ ದುರುಪಯೋಗ ಪಡಿಸಿಕೊಳ್ಳಲು ಲೀಗ್ ಹಾಗೂ ಜಿಲ್ಲಾ ಪಂಚಾಯತ್, ಪಂಚಾಯತ್ ಜನಪ್ರತಿನಿಧಿಗಳು ಯತ್ನಿಸುತ್ತಿದ್ದಾರೆ ಎಂದು ಅಶ್ವಿನಿ ಹೇಳಿದ್ದಾರೆ.

0 Comments