ಬದಿಯಡ್ಕ: ಬದಿಯಡ್ಕ ಮೇಲಿನ ಬಜಾರ್ನಿಂದ ಪೆರಡಾಲ ಉನ್ನತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪಾದಚಾರಿಗಳ ಸಂಚಾರಕ್ಕೂ ತೀವ್ರ ತೊಂದರೆ ಉಂಟಾಗಿದೆ. ರಸ್ತೆ ಎರಡೂ ಬದಿಗಳಲ್ಲಿ ಚರಂಡಿ ಹಾಗೂ ಪಾದಚಾರಿ ಮಾರ್ಗದ ಕೊರತೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಿರಿದಾದ ಈ ರಸ್ತೆಯ ಹಲವು ಭಾಗಗಳು ಕುಸಿದು ಹೊಂಡಗಳಾಗಿದ್ದು, ಮಳೆನೀರು ರಸ್ತೆ ಮೂಲಕವೇ ಹರಿಯುತ್ತಿದೆ. ರಸ್ತೆಯ ಪಕ್ಕದಲ್ಲಿರುವ ಆಳವಾದ ಕಾಲುವೆಗಳು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ.
ಪೆರಡಾಲ ಉನ್ನತಿ ಪ್ರದೇಶದ ಸುಮಾರು 40 ಕುಟುಂಬಗಳು ಈ ರಸ್ತೆಯನ್ನೇ ಅವಲಂಬಿಸಿದ್ದು, 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರೀ-ಮೆಟ್ರಿಕ್ ಹಾಸ್ಟೆಲ್ ವಿದ್ಯಾರ್ಥಿಗಳ ದೈನಂದಿನ ಸಂಚಾರವೂ ಇದೇ ರಸ್ತೆಯ ಮೂಲಕ ನಡೆಯುತ್ತದೆ. ಶಾಲಾ ಸಮಯದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಹಲವೆಡೆ ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸಲು ಬೇಕಾದಷ್ಟು ರಸ್ತೆ ಅಗಲವಿಲ್ಲ.
ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಪಾದಚಾರಿಗಳು ವಾಹನಗಳಿಗೆ ದಾರಿ ಬಿಡಲು ರಸ್ತೆ ಬದಿಯ ಹೊಂಡಗಳಿಗೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ರಸ್ತೆಗೆ ಸರ್ಕಾರಿ ಆಸ್ಪತ್ರೆ ಭಾಗದಿಂದ ಸಂಪರ್ಕಿಸುವ ಮತ್ತೊಂದು ರಸ್ತೆಯೂ ಇದೆ.
ಆಸ್ಪತ್ರೆ ರಸ್ತೆಯನ್ನು ದುರಸ್ತಿ ಮಾಡಿ ಶಾಲಾ ಸಮಯದಲ್ಲಿ ವಾಹನ ಸಂಚಾರವನ್ನು ಒಂದು ದಿಕ್ಕಿನಲ್ಲಿ ನಿಯಂತ್ರಿಸಿದರೆ ತಾತ್ಕಾಲಿಕ ಪರಿಹಾರ ದೊರೆಯಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪೆರಡಾಲ ಉನ್ನತಿಗೆ ಸಂಪರ್ಕಿಸುವ ಸುಮಾರು 200 ಮೀಟರ್ ರಸ್ತೆಯಲ್ಲಿ ಚರಂಡಿ ಮತ್ತು ಪಾದಚಾರಿ ಮಾರ್ಗ ನಿರ್ಮಿಸಿದಾಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

0 Comments