ಪೆರ್ಲ: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಿಂದ ಸ್ವರ್ಗ, ಪಾಣಾಜೆ ಮಾರ್ಗವಾಗಿ ಕರ್ನಾಟಕದ ಪುತ್ತೂರನ್ನು ಸಂಪರ್ಕಿಸುವ ಪ್ರಮುಖ ಅಂತಾರಾಜ್ಯ ರಸ್ತೆ ಪೆರ್ಲ-ಸ್ವರ್ಗ (ಸೂರಂಬೈಲು) ರಸ್ತೆಯ ಅಭಿವೃದ್ಧಿಗಾಗಿ ನಾಗರಿಕ ಕ್ರಿಯಾ ಸಮಿತಿಯನ್ನು ರಚಿಸಲಾಗಿದೆ.
ಸ್ವರ್ಗದ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಬಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಜೆ.ಎಸ್., ರಸ್ತೆ ಅಭಿವೃದ್ಧಿಯ ವಿಷಯದಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕಿದೆ. ಕೇವಲ ಮನವಿ ಸಲ್ಲಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ರಸ್ತೆ ದುಸ್ಥಿತಿಯನ್ನು ನಿರಂತರವಾಗಿ ತಂದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು. ಅಗತ್ಯವಿದ್ದರೆ ಪ್ರತಿಭಟನೆಗೂ ಸಜ್ಜಾಗಬೇಕು ಎಂದು ಹೇಳಿದರು.
ಪ್ರಸ್ತುತ ರಸ್ತೆಯ ಎರಡೂ ಬದಿಯ ಡಾಂಬರ್ ಅಂಚುಗಳು ಕಿತ್ತುಹೋಗಿದ್ದು, ಹಲವೆಡೆ ಆಳವಾದ ಹೊಂಡಗಳು ಉಂಟಾಗಿವೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ರಸ್ತೆಯನ್ನು ಅಗಲಗೊಳಿಸಿ ಸಮಗ್ರ ಅಭಿವೃದ್ಧಿಪಡಿಸಬೇಕೆಂದು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಕೆಎಸ್ಇಬಿ ವತಿಯಿಂದ ತೋಟಗಾರಿಕಾ ನಿಗಮದ ರಬ್ಬರ್ ತೋಟದ ಮೂಲಕ ಹಾದುಹೋಗುವ ವಿದ್ಯುತ್ ತಂತಿಗಳನ್ನು ಭೂಗತ ಕೇಬಲ್ ಮೂಲಕ ಸ್ಥಳಾಂತರಿಸುವ ಕಾಮಗಾರಿಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಕಿಶೋರ್ ಕೋಟೆ ಆರೋಪಿಸಿದರು. ಅಗೆದ ಮಣ್ಣು ಕೆಳಭಾಗದ ಮನೆಗಳು ಮತ್ತು ತೋಟಗಳಿಗೆ ನುಗ್ಗುವ ಅಪಾಯ ಎದುರಾಗಿರುವುದನ್ನೂ ಅವರು ಉಲ್ಲೇಖಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮೊಗರು ಮಾತನಾಡಿ, ಕೆಎಸ್ಇಬಿ ಕಾಮಗಾರಿಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಸಚಿವರನ್ನು ಭೇಟಿ ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಜಯಾ ಕೆ., ಸದಾನಂದ ಶೆಟ್ಟಿ ಕುದ್ವ, ಬ್ಲಾಕ್ ಪಂಚಾಯತ್ ಸದಸ್ಯೆ ವಿದ್ಯಾಕುಮಾರಿ, ಗ್ರಾಮ ಪಂಚಾಯತ್ ಸದಸ್ಯೆ ನಳಿನಾಕ್ಷಿ ಸಿ.ಸಿ., ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎಸ್. ಗಾಂಭೀರ್ ಸೇರಿದಂತೆ ಹಲವರು ಮಾತನಾಡಿದರು. ಕೆ.ವೈ. ಸುಬ್ರಹ್ಮಣ್ಯ ಭಟ್, ರಮಾನಂದ ಎಡಮಲೆ, ವೆಂಕಟ್ರಮಣ ಭಟ್ ಎಡಮಲೆ, ಸದಾನಂದ ಬೈರಡ್ಕ, ಈಶ್ವರ ಪ್ರಸಾದ್ ಪಂಬೆತ್ತಡ್ಕ, ಕೃಷ್ಣಕುಮಾರ್ ನೆಕ್ಕರೆಕಾಡು, ನಾಗರಾಜ್ ಬಾಳಿಕೆ ಹಾಗೂ ಶಿವಪ್ರಕಾಶ್ ಪಾಲೆಪ್ಪಾಡಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಸಭೆಯಲ್ಲಿ ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಜೆ.ಎಸ್. ಹಾಗೂ ಸಂಚಾಲಕರಾಗಿ ವಾರ್ಡ್ ಸದಸ್ಯ ರಾಮಚಂದ್ರ ಎಂ. ಅವರನ್ನು ಆಯ್ಕೆ ಮಾಡಲಾಯಿತು. ಹತ್ತಕ್ಕೂ ಹೆಚ್ಚು ಮಂದಿಯನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.
ವಾರ್ಡ್ ಸದಸ್ಯ ರಾಮಚಂದ್ರ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಜಿ ಸದಸ್ಯ ರವಿ ವಾಣೀನಗರ ವಂದಿಸಿದರು.
.jpeg)
0 Comments