ತಿರುವನಂತಪುರ : ಬಾತ್ರೂಮ್ ನಲ್ಲಿ ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ತಿರುವನಂತಪುರ ಅಬಕಾರಿ ಆಯುಕ್ತರ ಕಚೇರಿಯ ಸಿಬ್ಬಂದಿಯಾಗಿದ್ದ ಕಣಿಯಾಪುರಂ ಚಾನ್ನಾಂಕರ ಮೈವಳ್ಳಿ ನಿವಾಸಿ ಜಾಬಿರ್ (44) ಮೃತರು. ಇವರು ದಿ. ಇಬ್ರಾಹಿಂ ಕುಂಞಿ ಹಾಗೂ ನಫೀಸಾ ಬೀವಿ ಅವರ ಪುತ್ರರಾಗಿದ್ದಾರೆ. ಕಳೆದ ಮಂಗಳವಾರ ಮುಂಜಾನೆ 4.15ರ ಸುಮಾರಿಗೆ ಕೋಲಿಯಕ್ಕೋಡ್ನಲ್ಲಿರುವ ಪತ್ನಿಯ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಬಾತ್ರೂಮ್ನಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದ್ದು, ಕುಟುಂಬಸ್ಥರು ಕೂಡಲೇ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಜಾಬಿರ್ ಅವರು ಶುಕ್ರವಾರ ಮುಂಜಾನೆ ಸುಮಾರು 2 ಗಂಟೆಗೆ ಕೊನೆಯುಸಿರೆಳೆದರು. ವೆಂಜಾರಮೂಡು ಪೊಲೀಸರು ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ನಂತರ ಅಬಕಾರಿ ಆಯುಕ್ತರ ಕಚೇರಿ ಹಾಗೂ ಚಾನ್ನಾಂಕರದಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಕಣಿಯಾಪುರಂ ಜುಮಾ ಮಸೀದಿ ಕಬರಸ್ತಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
.png)
0 Comments