ಮ್ಯಾನ್ಮಾರ್ : ಬಂಗಾಳ ಕೊಲ್ಲಿಯಲ್ಲಿ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಎರಡು ದೋಣಿಗಳು ಮ್ಯಾನ್ಮಾರ್ ಸಮುದ್ರದಲ್ಲಿ ಮುಳುಗಿದ ಪರಿಣಾಮ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಅತಿದೊಡ್ಡ ಸಮುದ್ರ ದುರಂತಗಳಲ್ಲಿ ಇದೂ ಒಂದಾಗಿದೆ ಎಂದು ಸಂಯುಕ್ತ ರಾಷ್ಟ್ರ ಸಂಸ್ಥೆ ತಿಳಿಸಿದೆ.
ಮ್ಯಾನ್ಮಾರ್ನ ಸಂಘರ್ಷಪೀಡಿತ ರಾಖೈನ್ ರಾಜ್ಯ ಹಾಗೂ ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಿಂದ ಹೊರಟಿದ್ದ ಎರಡು ದೋಣಿಗಳು ಭಾರೀ ಮಳೆ, ಅಲೆಗಳ ಅಬ್ಬರ ಮತ್ತು ಕೆಟ್ಟ ಹವಾಮಾನದಿಂದ ಅಪಘಾತಕ್ಕೀಡಾಗಿವೆ ಎಂದು ತಿಳಿದುಬಂದಿದೆ.
ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಹಾಗೂ ಯುಎನ್ ಶರಣಾರ್ಥಿಗಳ ಉನ್ನತ ಆಯುಕ್ತರ ಕಚೇರಿ ಈ ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಹೇಳಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 250 ಮಂದಿಯನ್ನು ಹೊತ್ತಿದ್ದ ಒಂದು ದೋಣಿಯ ಸಂಪರ್ಕ ಹೊರಟ ಕೆಲವೇ ಹೊತ್ತಿನಲ್ಲಿ ಕಳೆದುಹೋಗಿತ್ತು. ಮತ್ತೊಂದು ದೋಣಿ ಸುಮಾರು 280 ಪ್ರಯಾಣಿಕರೊಂದಿಗೆ ಜುಲೈ 8ರಂದು ಮ್ಯಾನ್ಮಾರ್ನ ಅಯ್ಯರ್ವಾಡಿ ಕರಾವಳಿ ಬಳಿ ಮುಳುಗಿದೆ ಎಂದು ಶಂಕಿಸಲಾಗಿದೆ.
ಮಳೆಗಾಲದ ತೀವ್ರ ಹವಾಮಾನದಿಂದ ಬಂಗಾಳ ಕೊಲ್ಲಿಯ ಸಮುದ್ರಯಾನ ಅತ್ಯಂತ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ. ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯೂ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿರುವುದಾಗಿ ಯುಎನ್ ಸಂಸ್ಥೆಗಳು ತಿಳಿಸಿವೆ.
ಮ್ಯಾನ್ಮಾರ್ನಲ್ಲಿ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯ ಮತ್ತು ಬಡತನದಿಂದ ಪಾರಾಗಲು ಸಾವಿರಾರು ರೋಹಿಂಗ್ಯರು ಜೀವದ ಹಂಗು ತೊರೆದು ಸಮುದ್ರ ಮಾರ್ಗವನ್ನು ಆಯ್ಕೆ ಮಾಡುತ್ತಿದ್ದಾರೆ. ಪ್ರಸ್ತುತ ಸುಮಾರು 12 ಲಕ್ಷ ರೋಹಿಂಗ್ಯ ನಿರಾಶ್ರಿತರು ಬಾಂಗ್ಲಾದೇಶದ ಶಿಬಿರಗಳಲ್ಲಿ ವಾಸಿಸುತ್ತಿದ್ದು ಮ್ಯಾನ್ಮಾರ್ನಲ್ಲಿ ಉಳಿದಿರುವವರು ಕಠಿಣ ನಿರ್ಬಂಧಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ.

0 Comments