ಹೈದರಾಬಾದ್ : ಗಿನ್ನೆಸ್ ವಿಶ್ವ ದಾಖಲೆ ಮಾಡುವ ಉದ್ದೇಶದಿಂದ ಕೇವಲ ಆರು ವರ್ಷದ ಮೊಮ್ಮಗಳಿಂದ ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಕಾರು ಚಲಾಯಿಸಿದ ಆರೋಪದ ಮೇಲೆ ತೆಲಂಗಾಣದ ಪೊಲೀಸ್ ಉಪನಿರೀಕ್ಷಕ (ಎಸ್ಐ) ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ.
ರಂಗಾರೆಡ್ಡಿ ಜಿಲ್ಲೆಯ ಪೊಲೀಸ್ ಅಧಿಕಾರಿ ಪೂಜಾರಿ ತಿರುಪತಿ ಅವರು ಮುಂಭಾಗದ ಆಸನದಲ್ಲಿ ಕುಳಿತುಕೊಂಡು, ತಮ್ಮ ಆರು ವರ್ಷದ ಮೊಮ್ಮಗಳು ಕಾರು ಚಲಾಯಿಸಲು ಅವಕಾಶ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಾಹನ ನಿಧಾನವಾಗಿ ಸಂಚಾರದಲ್ಲಿದ್ದರೂ, ದಟ್ಟಣೆಯ ರಸ್ತೆಯಲ್ಲಿ ಬಾಲಕಿ ಚಾಲನೆ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಸ್ಥಳೀಯರು, "ಚಾಲನಾ ತರಬೇತಿ ರಸ್ತೆಯಲ್ಲಿ ಅಲ್ಲ, ಮೈದಾನದಲ್ಲಿ ನೀಡಬೇಕು. ಮೋಟಾರು ವಾಹನ ಕಾಯ್ದೆ ಪೊಲೀಸರಿಗೆ ಅನ್ವಯಿಸುವುದಿಲ್ಲವೇ?" ಎಂದು ಪ್ರಶ್ನಿಸಿದಾಗ, ಇದು ಗಿನ್ನೆಸ್ ದಾಖಲೆಗೆ ತರಬೇತಿ ಎಂದು ಎಸ್ಐ ಪ್ರತಿಕ್ರಿಯಿಸಿದ್ದಲ್ಲದೆ, "ಇದು ನನ್ನ ನಿರ್ಧಾರ, ಪ್ರಶ್ನಿಸಲು ನೀವು ಯಾರು?" ಎಂದು ಆಕ್ರೋಶ ವ್ಯಕ್ತಪಡಿಸಿದ ವಿಡಿಯೊವೂ ಹರಿದಾಡಿದೆ.
ಘಟನೆಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ನರಸಿಂಗಿ ಪೊಲೀಸರು ಆ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜನರ ಜೀವಕ್ಕೆ ಅಪಾಯ ತಂದೊಡ್ಡುವುದು ಮತ್ತು ಕಾನೂನುಬಾಹಿರವಾಗಿ ಡ್ರೈವಿಂಗ್ ಮಾಡಲು ಬಿಟ್ಟಿರುವುದಕ್ಕಾಗಿ ಬಿಎನ್ಎಸ್ ಸೆಕ್ಷನ್ 180 ಹಾಗೂ ಮೋಟರ್ ವಾಹನ ಕಾಯ್ದೆ 184 ಅಡಿಯಲ್ಲಿ ಕೇಸ್ ದಾಖಲಾಗಿದೆ. ವಿಚಾರಣೆ ವೇಳೆ ಆ ಅಧಿಕಾರಿ, ಅದು ಆಟೋಮ್ಯಾಟಿಕ್ ಕಾರ್ ಆಗಿದ್ದರಿಂದ ಕಾರು ನನ್ನ ನಿಯಂತ್ರಣದಲ್ಲೇ ಇತ್ತು. ಅಲ್ಲದೇ, ತನ್ನ ಮೊಮ್ಮಗಳಿಗೆ ಗಿನ್ನೆಸ್ ರೆಕಾರ್ಡ್ ಮಾಡಲು ತರಬೇತಿ ನೀಡುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ತೆಲಂಗಾಣದ ಡಿಜಿಪಿ ಸಿ.ವಿ. ಆನಂದ್ ಅವರು, ಆರೋಪಿ ಸಬ್ ಇನ್ಸ್ಪೆಕ್ಟರ್ ನನ್ನು ತಕ್ಷಣ ಕೆಲಸದಿಂದ ಅಮಾನತು ಮಾಡುವಂತೆ ಸೈಬರಾಬಾದ್ ಪೊಲೀಸ್ ಕಮಿಷನರ್ಗೆ ಆದೇಶಿಸಿದ್ದಾರೆ. ಅಲ್ಲದೆ, ಇಲಾಖಾ ಮಟ್ಟದ ತನಿಖೆಗೂ ಆದೇಶ ನೀಡಲಾಗಿದೆ.
ಈ ರೀತಿಯ ನಿರ್ಲಕ್ಷ್ಯದಿಂದ ಕಾರಿನಲ್ಲಿದ್ದವರಷ್ಟೇ ಅಲ್ಲ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೂ ಅಪಾಯ ಉಂಟಾಗಬಹುದೆಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

0 Comments