ಮುಳ್ಳೇರಿಯ : ದೇಲಂಪಾಡಿ ಪಂಚಾಯತ್ ವ್ಯಾಪ್ತಿಯ ಆಡೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ಚಿಕಿತ್ಸೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಪ್ರತಿದಿನ ಆಸ್ಪತ್ರೆಗೆ ಆಗಮಿಸುವ ನೂರಾರು ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಉತ್ತಮ ಕಟ್ಟಡ, ಅಗತ್ಯ ಔಷಧಿ ಮತ್ತು ಮೂಲಸೌಕರ್ಯಗಳಿದ್ದರೂ, ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಒಬ್ಬ ವೈದ್ಯರೂ ಇಲ್ಲದ ಕಾರಣ ಹೊರರೋಗಿ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಆರು ತಿಂಗಳ ಮೊದಲು ಇಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಭಾನುವಾರಗಳಲ್ಲೂ ಮೂವರು ವೈದ್ಯರು ಸೇವೆ ಸಲ್ಲಿಸುತ್ತಿದ್ದರು. ನಂತರ ಪಂಚಾಯತ್ ನೇಮಕ ಮಾಡಿದ್ದ ಒಬ್ಬ ವೈದ್ಯರು ಸೇವೆಯಿಂದ ನಿರ್ಗಮಿಸಿದ ಪರಿಣಾಮ ಭಾನುವಾರದ ಓಪಿ ಸೇವೆ ಸ್ಥಗಿತವಾಯಿತು. ಬಳಿಕ ಮತ್ತೊಬ್ಬ ವೈದ್ಯರು ವರ್ಗಾವಣೆಯಾಗಿದ್ದು, ಒಬ್ಬರೇ ಉಳಿದಿದ್ದರು. ಇತ್ತೀಚೆಗೆ ಆ ವೈದ್ಯರೂ ತಮ್ಮ ಸ್ವಗ್ರಾಮಕ್ಕೆ ವರ್ಗಾವಣೆಯಾಗಿದ್ದರಿಂದ ಆಸ್ಪತ್ರೆ ವೈದ್ಯರಿಲ್ಲದ ಸ್ಥಿತಿಗೆ ತಲುಪಿದೆ.
ಪ್ರತಿದಿನ 200ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಿದ್ದು, ಟೋಕನ್ ಪಡೆಯಲು ಬಂದವರಿಗೆ "ವೈದ್ಯರಿಲ್ಲ" ಎಂಬ ಉತ್ತರವೇ ಸಿಗುತ್ತಿದೆ. ಈ ವಿಷಯ ತಿಳಿಯದೆ ದೂರದ ಊರುಗಳಿಂದ ಬರುವ ರೋಗಿಗಳು ನಿರಾಶರಾಗಿ ಹಿಂತಿರುಗುವಂತಾಗಿದೆ.
ಇದರಿಂದ ದೇಲಂಪಾಡಿ, ಆಡೂರು, ಪಾಂಡಿ, ಕಾರಡ್ಕ ಪಂಚಾಯತ್ ವ್ಯಾಪ್ತಿಯ ಕುಂದಾರ್, ಪಡಿಯತ್ತಡ್ಕ ಸೇರಿದಂತೆ ಕರ್ನಾಟಕ ಗಡಿಭಾಗದ ಬಡ ಜನರು ಚಿಕಿತ್ಸೆಗಾಗಿ ಸುಮಾರು 15 ಕಿ.ಮೀ. ದೂರದ ಮುಳ್ಳೇರಿಯ ಅಥವಾ ಕರ್ನಾಟಕದ ಸುಳ್ಯ, ಪುತ್ತೂರು ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಆಡೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ ತಕ್ಷಣ ವೈದ್ಯರನ್ನು ನೇಮಿಸಿ, ಸಾರ್ವಜನಿಕರಿಗೆ ಸುಗಮ ಆರೋಗ್ಯ ಸೇವೆ ಒದಗಿಸಬೇಕು ಎಂದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

0 Comments