ಮಧೂರು : ಕಾಸರಗೋಡಿನ ಪ್ರಸಿದ್ಧ ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪಾರಂಪರಿಕ ಅರ್ಚಕರಾಗಿದ್ದ ವೇಣುಗೋಪಾಲ ಕಲ್ಲೂರಾಯ (78) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಮಧೂರು ಮೇಲಿನ ಮನೆ ನಿವಾಸಿಯಾಗಿದ್ದ ಅವರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು. ಶನಿವಾರ ಬೆಳಿಗ್ಗೆ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿತು.
ವೇಣುಗೋಪಾಲ ಕಲ್ಲೂರಾಯ ಅವರು ಧಾರ್ಮಿಕ ಸೇವೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯರಾಗಿದ್ದರು. ಶಿವಳ್ಳಿ ಬ್ರಾಹ್ಮಣ ಸಭೆ ಕಾಸರಗೋಡು ವಲಯ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮುದಾಯದ ಸಂಘಟನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು.
ನಿವೃತ್ತ ಶಿಕ್ಷಕರಾಗಿದ್ದ ಅವರು ಹವ್ಯಾಸಿ ಯಕ್ಷಗಾನ ಕಲಾವಿದರೂ, ಸಂಗೀತ ವಿದ್ವಾಂಸರೂ ಆಗಿದ್ದರು. ಪೌರೋಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಗೌರವ ಗಳಿಸಿದ್ದ ಅವರು ಹಲವು ವರ್ಷಗಳಿಂದ ಮಧೂರು ಕ್ಷೇತ್ರದಲ್ಲಿ ಧಾರ್ಮಿಕ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಕಮಲಾಕ್ಷಿ (ಸೀಮಾ), ಪುತ್ರರಾದ ವಸಂತ ಕಲ್ಲೂರಾಯ (ಮಧೂರು ಕ್ಷೇತ್ರದ ಅರ್ಚಕ) ಹಾಗೂ ಕಿಶೋರ್ (ಹರಿ ಕೇಶವ ಕಲ್ಲೂರಾಯ) (ಉಡುಪಿ ಕಾಲೇಜಿನ ಉಪನ್ಯಾಸಕ), ಸೊಸೆ ಕಾವ್ಯಶ್ರೀ, ಸಹೋದರ ಬಾಲಚಂದ್ರ ಕಲ್ಲೂರಾಯ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

0 Comments