ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಯತಿಗಳ ದಿವ್ಯ ಸಾನ್ನಿಧ್ಯವನ್ನು ಪ್ರತಿಬಿಂಬಿಸುವ ಸುವರ್ಣ ಪಾದುಕೆಗಳ ಸವಾರಿಗೆ ಮುಳ್ಳೇರಿಯ ಮಂಡಲದ ನೀರ್ಚಾಲು ವಲಯದಲ್ಲಿ ಭಕ್ತಿಪೂರ್ವಕ ಸ್ವಾಗತ ಕೋರಲಾಯಿತು.
ಶುಕ್ರವಾರ ಸಂಜೆ ಬೇಳದ ಶ್ರೀಧರ ಪ್ರಸಾದ್ ಅವರ ನಿವಾಸದಲ್ಲಿ ಪೂರ್ಣಕುಂಭದೊಂದಿಗೆ ಸುವರ್ಣ ಪಾದುಕೆಗಳನ್ನು ಬರಮಾಡಿಕೊಳ್ಳಲಾಗಿದ್ದು, ವೇದಘೋಷಗಳ ನಡುವೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಶನಿವಾರ ಬೆಳಗ್ಗೆ ಹೊಸಮನೆ ಕೃಷ್ಣ ಭಟ್, ಗೋಪಿ ಅಮ್ಮ ನೀರ್ಚಾಲು, ಕೃಷ್ಣಪ್ರವೀಣ ಕೊಳಂಬೆ, ರವೀಂದ್ರನಾಥ ಭಟ್, ಸರಳಿ ಕೃಷ್ಣ ಭಟ್, ಶಂಕರನಾರಾಯಣ ಶರ್ಮ ಶ್ರೀಮಾತಾ ಕಿಳಿಂಗಾರು ಹಾಗೂ ಗೋಪಾಲಕೃಷ್ಣ ಭಟ್ ಮೂಲಡ್ಕ ಅವರ ಮನೆಗಳಲ್ಲಿ ಸುವರ್ಣ ಪಾದುಕಾ ಪೂಜೆ ಭಕ್ತಿ-ಶ್ರದ್ಧೆಯಿಂದ ನಡೆಯಿತು.
ಬಳಿಕ ಬೇಳದ ಶ್ರೀಧರ ಪ್ರಸಾದ್ ಅವರ ಮನೆಯಲ್ಲಿ ಗುರುಭಿಕ್ಷಾ ಸೇವೆ, ಅಷ್ಟಾವಧಾನ ಸೇವೆ ಹಾಗೂ ಮಹಾಪೂಜೆ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀಮಠದ ಶಿಷ್ಯರು, ಭಕ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.
ಸಂಜೆ ಸುವರ್ಣ ಪಾದುಕೆಗಳ ಸವಾರಿಯನ್ನು ಕಾಸರಗೋಡು ವಲಯದತ್ತ ಭಕ್ತಿಭಾವದಿಂದ ಬೀಳ್ಕೊಡಲಾಯಿತು.

0 Comments